ಮುಖೇಶ್ ಅಂಬಾನಿಯವರ ರಿಲಯೆನ್ಸ್ ಇಂಡಸ್ಟ್ರೀಸ್ ಮತ್ತು ಅನಿಲ್ ಅಂಬಾನಿಯವರ ರಿಲಯೆನ್ಸ್ ನ್ಯಾಚುರಲ್ ರಿಸೋರ್ಸಸ್ ನಡುವಿನ ನೈಸರ್ಗಿಕ ಅನಿಲ ವಿವಾದ ಪ್ರಕರಣವನ್ನು ಕೈಗೆತ್ತಿಕೊಂಡ ಸರ್ವೋಚ್ಛ ನ್ಯಾಯಾಲಯವು ಮುಂದಿನ ವಿಚಾರಣೆಯನ್ನು ಸೆಪ್ಟೆಂಬರ್ 1ಕ್ಕೆ ಮುಂದೂಡಿದೆ.
ಆರ್ಎನ್ಆರ್ಎಲ್ಗೆ ಅನಿಲ ಪೂರೈಸುವಂತೆ ಜೂನ್ 15ರಂದು ಬಾಂಬೆ ಹೈಕೋರ್ಟ್ ನೀಡಿದ್ದ ಆದೇಶಕ್ಕೆ ತಡೆ ನೀಡಲು ಆರ್ಐಎಲ್ ಮಾಡಿದ್ದ ಮನವಿಯನ್ನು ತ್ರಿಸದಸ್ಯ ಪೀಠದ ವಿಚಾರಣೆಗೆ ಮೊದಲು ನ್ಯಾಯಾಲಯ ಕೈಗೆತ್ತಿಕೊಳ್ಳಲಿದೆ ಎಂದು ಮುಖ್ಯ ನ್ಯಾಯಮೂರ್ತಿ ಕೆ.ಜಿ. ಬಾಲಕೃಷ್ಣನ್ ತಿಳಿಸಿದ್ದಾರೆ.
ಸಹೋದರರು 2005ರಲ್ಲಿ ಭಿನ್ನ ಹಾದಿ ತುಳಿದ ನಂತರ ಕೃಷ್ಣ ಗೋದಾವರಿ ನೈಸರ್ಗಿಕ ಅನಿಲ ಪೂರೈಕೆ ಒಪ್ಪಂದವು ನೆನೆಗುದಿಗೆ ಬಿದ್ದಿತ್ತು. ಬಾಂಬೆ ಹೈಕೋರ್ಟ್ ಮೆಟ್ಟಿಲೇರಿದ್ದ ಪ್ರಕರಣದಲ್ಲಿ ಅನಿಲ್ ನೇತೃತ್ವದ ರಿಲಯೆನ್ಸ್ ನ್ಯಾಚುರಲ್ ರಿಸೋರ್ಸಸ್ ಸಂಸ್ಥೆಗೆ ಜಯ ದೊರಕಿತ್ತು.
ಸರಕಾರ ನಿಗದಿಪಡಿಸಿದ್ದ ಮೊತ್ತಕ್ಕಿಂತ ಶೇಕಡಾ 44ರಷ್ಟು ಕಡಿಮೆ ಮೊತ್ತಕ್ಕೆ ಅನಿಲ ಪೂರೈಸುವಂತೆ ನ್ಯಾಯಾಲಯ ಆದೇಶಿಸಿದ್ದ ಕಾರಣ ಮುಖೇಶ್ ಮಾಲಕತ್ವದ ರಿಲಯೆನ್ಸ್ ಇಂಡಸ್ಟ್ರೀಸ್ ಸುಪ್ರೀಂ ಮೆಟ್ಟಿಲೇರಿತ್ತು.
ಈ ನಡುವೆ ಸರಕಾರವೂ ಸುಪ್ರೀಂ ಕೋರ್ಟ್ಗೆ ಮೊರೆ ಹೋಗಿದ್ದು, ನೈಸರ್ಗಿಕ ಅನಿಲ ತನಗೆ ಸೇರಿದ್ದು, ಅಂಬಾನಿಗಳದ್ದಲ್ಲ. ಅಂಬಾನಿಗಳು ಮಾಡಿಕೊಂಡಿರುವ ಖಾಸಗಿ ಒಪ್ಪಂದಕ್ಕೆ ಯಾವುದೇ ಬೆಲೆಯೂ ಇಲ್ಲ ಎಂದು ಸರಕಾರ ವಾದಿಸುತ್ತಿದೆ.
ನ್ಯಾಯಾಲಯವು ಎಲ್ಲಾ ಮನವಿ ಮತ್ತು ಅರ್ಜಿಗಳನ್ನು ಈ ಪ್ರಕರಣದಲ್ಲಿ ಒಟ್ಟು ಸೇರಿಸಿ ವಿಚಾರಣೆ ನಡೆಸಲಿದೆ ಎಂದು ರಿಲಯೆನ್ಸ್ ನ್ಯಾಚುರಲ್ ವಕೀಲ ರಾಮ್ ಜೇಠ್ಮಲಾನಿ ತಿಳಿಸಿದ್ದಾರೆ.
"ನ್ಯಾಯಾಲಯವು ಈ ಪ್ರಕರಣವನ್ನು ಮೂರು ಮಂದಿ ನ್ಯಾಯಾಧೀಶರೊಂದಿಗೆ ವಿಚಾರಣೆ ನಡೆಸಲು ಬಯಸುತ್ತಿದೆ. ಆ ಕಾರಣಕ್ಕಾಗಿ ಮುಂದಿನ ದಿನಾಂಕವನ್ನು ಸೆಪ್ಟೆಂಬರ್ 1ರವರೆಗೆ ಮುಂದೂಡಲಾಗಿದೆ" ಎಂದು ಅವರು ಮಾಹಿತಿ ನೀಡಿದರು.
|