ರಿಲಯೆನ್ಸ್ ಇಂಡಸ್ಟ್ರೀಸ್ ಜತೆಗಿನ ವಿವಾದದಲ್ಲಿ ಮೂಗು ತೂರಿಸದಂತೆ ಕೇಂದ್ರ ಪೆಟ್ರೋಲಿಯಂ ಸಚಿವಾಲಯಕ್ಕೆ ಸೂಚನೆ ನೀಡಬೇಕೆಂದು ರಿಲಯೆನ್ಸ್ ನ್ಯಾಚರಲ್ ರಿಸೋರ್ಸಸ್ ಮುಖ್ಯಸ್ಥ ಅನಿಲ್ ಅಂಬಾನಿ ಪ್ರಧಾನ ಮಂತ್ರಿ ಮನಮೋಹನ್ ಸಿಂಗ್ರನ್ನು ಒತ್ತಾಯಿಸಿದ್ದಾರೆ.
ಈ ಸಂಬಂಧ ಅನಿಲ್ ಜುಲೈ 15ರಂದು ಪ್ರಧಾನಿಯವರಿಗೆ ಪತ್ರ ಬರೆದಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಸಚಿವಾಲಯದ ಪ್ರತ್ಯಕ್ಷ ಅಥವಾ ಪರೋಕ್ಷ ಪಾಲ್ಗೊಳ್ಳುವಿಕೆಯನ್ನು ವಿರೋಧಿಸಿರುವ ಅನಿಲ್ ಅಂಬಾನಿಯವರು, ಆರ್ಐಎಲ್ ಜತೆಗಿನ ವಾಣಿಜ್ಯ ವಿವಾದದಲ್ಲಿ ಪಕ್ಷಪಾತ ಕೂಡ ನಡೆಸಬಾರದು ಎಂದು ಒತ್ತಾಯಿಸಿದ್ದಾರೆ. ಅಲ್ಲದೆ ತಾನು ಈ ಸಂಬಂಧ ಪ್ರಧಾನಿಯವರನ್ನು ಭೇಟಿಯಾಗುವ ಮತ್ತು ವಿವಾದದ ಬಗ್ಗೆ ವಿವರಣೆ ನೀಡುವ ಕೋರಿಕೆಯನ್ನೂ ಸಲ್ಲಿಸಿದ್ದಾರೆ ಎಂದು ತಿಳಿದು ಬಂದಿದೆ.
ಪ್ರಧಾನ ಮಂತ್ರಿಯವರಿಗೆ ಪತ್ರ ಕಳುಹಿಸಿರುವುದನ್ನು ಒಪ್ಪಿಕೊಂಡಿರುವ ಅನಿಲ್ ಅಂಬಾನಿ ಸಮೂಹದ ವಕ್ತಾರ, ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಲು ನಿರಾಕರಿಸಿದ್ದಾರೆ.
ಅನಿಲ್, ಮುಖೇಶ್ ಮತ್ತು ಸರಕಾರಗಳು ಸುಪ್ರೀ ಕೋರ್ಟ್ ಮೆಟ್ಟಿಲೇರಿದ್ದ ಹಿನ್ನಲೆಯಲ್ಲಿ ಪ್ರಕರಣವನ್ನು ಕೈಗೆತ್ತಿಕೊಂಡಿದ್ದ ನ್ಯಾಯಾಲಯವು ವಿಚಾರಣೆಯನ್ನು ಸೆಪ್ಟೆಂಬರ್ ಒಂದಕ್ಕೆ ಮುಂದೂಡಿದೆ. ಪ್ರಕರಣವನ್ನು ಮಿಲಿತಗೊಳಿಸಿ ತ್ರಿಸದಸ್ಯ ಪೀಠ ವಿಚಾರಣೆ ನಡೆಸಲಿದೆ ಎಂದು ಇದೇ ಸಂದರ್ಭದಲ್ಲಿ ವಕೀಲ ರಾಮ್ ಜೇಠ್ಮಲಾನಿ ತಿಳಿಸಿದ್ದಾರೆ.
|