ಭಾರತೀಯ ರೈಲ್ವೇಯ ದಿಢೀರ್ ಟಿಕೆಟ್ ವ್ಯವಸ್ಥೆ 'ತತ್ಕಾಲ್' ಆಗಸ್ಟ್ ಒಂದರಿಂದ ಪರಿಷ್ಕೃತಗೊಳ್ಳಲಿದ್ದು, ಅವಧಿಯನ್ನು ಐದು ದಿನಗಳಿಂದ ಎರಡು ದಿನಗಳಿಗೆ ಇಳಿಸಲಾಗಿದೆ. ಜತೆಗೆ ಅಸಂಘಟಿತ ವಲಯದವರಿಗೆ ನೀಡಲಾಗುವ 25 ರೂಪಾಯಿಗಳ ಮಾಸಿಕ ಪಾಸ್ 'ಇಜ್ಜತ್' ಕೂಡ ಅಂದೇ ಜಾರಿಗೆ ಬರಲಿದೆ.
"ತತ್ಕಾಲ್ ಟಿಕೆಟ್ ಕಾದಿರಿಸುವಿಕೆ ಬದಲಾವಣೆಗಳು ಆಗಸ್ಟ್ ಒಂದರಿಂದ ಜಾರಿಗೆ ಬರಲಿದೆ" ಎಂದು ರೈಲ್ವೇ ಸಚಿವಾಲಯ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.
ಪರಿಷ್ಕೃತ ತತ್ಕಾಲ್ ಪ್ರಕಾರ ಟಿಕೆಟ್ ಕಾದಿರಿಸುವಿಕೆಯಲ್ಲಿ ಮೂರು ದಿನಗಳ ಕಡಿತ ಮಾಡಲಾಗಿದ್ದು, ಪ್ರಯಾಣ ಮಾಡುವ ಎರಡು ದಿನ ಮೊದಲು ಟಿಕೆಟ್ ಬುಕ್ಕಿಂಗ್ ಮಾಡಬಹುದಾಗಿದೆ.
ಜುಲೈ 26ರಂದು ಬುಕ್ಕಿಂಗ್ ಮಾಡುವುದಾದರೆ ಐದು ದಿನ, 27ರಂದು ನಾಲ್ಕು ದಿನ, 28ರಂದು ಮೂರು ದಿನ 29ರಂದು ಎರಡು ದಿನಗಳಂತೆ ನಿಗದಿ ಪಡಿಸಲಾಗಿದ್ದು, ಆ ನಂತರ ಎರಡು ದಿನಗಳ ಪರಿಷ್ಕೃತ ಅವಧಿಯೇ ಮುಂದುವರಿಯಲಿದೆ.
ಉದಾಹರಣೆಗೆ 03-08-2009ರಂದು ನಿಮಗೆ ಯಾವುದೋ ನಗರಕ್ಕೆ ಪ್ರಯಾಣಿಸಬೇಕಿದ್ದರೆ ನೀವು 01.08.2009 ಮತ್ತು ಮರುದಿನ ಮಾತ್ರ ತತ್ಕಾಲ್ ಟಿಕೆಟ್ ಕಾದಿರಿಸಬಹುದು.
ಆಗಸ್ಟ್ 1ರಿಂದ 'ಇಜ್ಜತ್' ಕೂಡ ಲಭ್ಯ
ಅಸಂಘಟಿತ ವಲಯದವರಿಗೆಂದು ಮಮತಾ ಬ್ಯಾನರ್ಜಿ ರೈಲ್ವೇ ಬಜೆಟಿನಲ್ಲಿ ಪ್ರಕಟಿಸಿದ್ದ 'ಇಜ್ಜತ್' ಯೋಜನೆ ಕೂಡ ಆಗಸ್ಟ್ ಒಂದರಿಂದ ಜಾರಿಗೆ ಬರಲಿದೆ.
ಮಾಸಿಕ 1,500 ರೂಪಾಯಿಗಳೊಳಗೆ ಆದಾಯವಿರುವ ಅಸಂಘಟಿತ ವಲಯದ ಕಾರ್ಮಿಕರಿಗೆ ಈ ಮಾಸಿಕ ಪಾಸ್ ಲಭ್ಯವಿದೆ. 25 ರೂಪಾಯಿಗಳನ್ನು ನೀಡಿ ತಿಂಗಳಿಡೀ ಪ್ರಯಾಣ ಮಾಡುವ ಅವಕಾಶವನ್ನು ಇದರಡಿಯಲ್ಲಿ ನೀಡಲಾಗುತ್ತದೆ. ನಗರಗಳಿಗೆ ಪ್ರತಿ ದಿನ ಕೆಲಸಗಳಿಗೆಂದು ಹೋಗುವ ಕಾರ್ಮಿಕರು 'ಇಜ್ಜತ್' ಪಾಸ್ ಅಡಿಯಲ್ಲಿ ಗರಿಷ್ಠ 100 ಕಿ.ಮೀ. ಪ್ರಯಾಣಿಸಬಹುದಾಗಿದೆ.
ಜಿಲ್ಲಾ ಮ್ಯಾಜಿಸ್ಟ್ರೇಟರಿಂದ ಅಥವಾ ಸಂಸದರಿಂದ ಆದಾಯ ಪ್ರಮಾಣ ಪತ್ರ ಮತ್ತು ಕೇಂದ್ರ ಸರಕಾರ ನೀಡುವ ಬಡತನ ರೇಖೆಗಿಂತ ಕೆಳಗಿನವರ ಗುರುತಿನ ಚೀಟಿಯನ್ನು ಇದಕ್ಕಾಗಿ ಒದಗಿಸುವುದು ಅಗತ್ಯವಾಗಿರುತ್ತದೆ. ಮುಂದಿನ ತಿಂಗಳ ಆರಂಭದಿಂದಲೇ ಈ ಟಿಕೆಟು ಲಭ್ಯವಿದೆ ಎಂದು ರೈಲ್ವೇ ಇಲಾಖೆ ತಿಳಿಸಿದೆ.
|