ಅಮರನಾಥ ಯಾತ್ರಿಗಳಿಗೆ ಸಹಾಯಧನ ನೀಡುವ ಯಾವುದೇ ಪ್ರಸ್ತಾಪ ಸರಕಾರದ ಮುಂದಿಲ್ಲ ಎಂದು ಮಂಗಳವಾರ ಕೇಂದ್ರ ಸ್ಪಷ್ಟಪಡಿಸಿದೆ.
ಜುಲೈ 15ರವರೆಗೆ ಸುಮಾರು ಮೂರು ಲಕ್ಷ ಯಾತ್ರಾರ್ಥಿಗಳು ಅಮರನಾಥ ಯಾತ್ರೆ ಕೈಗೊಂಡಿದ್ದು, ಹವಮಾನವನ್ನಾಧರಿಸಿ ಇನ್ನೂ ಹೆಚ್ಚಿನ ಪ್ರವಾಸಿಗಳು ಭೇಟಿ ನೀಡುವ ಸಾಧ್ಯತೆಯಿದೆ ಎಂದು ಲೋಕಸಭೆಗೆ ಇದೇ ಸಂದರ್ಭದಲ್ಲಿ ಮಾಹಿತಿ ನೀಡಲಾಯಿತು.
"ಪ್ರಸಕ್ತ ವರ್ಷದ ಜುಲೈ 15ರವರೆಗೆ 3,01,297 ಯಾತ್ರಾರ್ಥಿಗಳು ಈ ಪುಣ್ಯಕ್ಷೇತ್ರದ ದರ್ಶನ ಪಡೆದುಕೊಂಡಿದ್ದಾರೆ. ಈ ವರ್ಷದ ಪ್ರವಾಸದಲ್ಲಿ ಇನ್ನೂ ಹೆಚ್ಚಳವಾಗುವ ಸಾಧ್ಯತೆಯಿದೆ. ಅದು ಹವಾಮಾನವನ್ನು ಹೊಂದಿಕೊಂಡಿರುವುದರಿಂದ ಈಗಲೇ ಅಂದಾಜು ಮಾಡಲಾಗದು" ಎಂದು ಗೃಹ ಖಾತೆಯ ರಾಜ್ಯ ಸಚಿವ ಅಜಯ್ ಮಕೇನ್ ಲಿಖಿತ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ವಾರ್ಷಿಕ ತೀರ್ಥಯಾತ್ರೆಗಾಗಿ ಸರಕಾರವು ವೆಚ್ಚ ಮಾಡಿರುವ ವಿವರಣೆಯನ್ನೂ ನೀಡಿದ ಸಚಿವರು, 2006ರಲ್ಲಿ 3,47,000 ಯಾತ್ರಾರ್ಥಿಗಳು ಅಮರನಾಥ ಗುಹಾಲಯಕ್ಕೆ ಭೇಟಿ ನೀಡಿದ್ದರು. ಆಗ 2.65 ಕೋಟಿ ರೂಪಾಯಿಗಳನ್ನು ಅವರಿಗಾಗಿ ವ್ಯಯಿಸಲಾಗಿತ್ತು ಎಂದಿದ್ದಾರೆ.
ಅದೇ ರೀತಿ 2007ನೇ ವರ್ಷದಲ್ಲಿ 2,96,656 ಭಕ್ತರು ಪುಣ್ಯಕ್ಷೇತ್ರದ ದರ್ಶನ ಮಾಡಿದ್ದು, ಮೂರು ಕೋಟಿಗಿಂತಲೂ ಹೆಚ್ಚು ಹಣವನ್ನು ಅವರಿಗಾಗಿ ಖರ್ಚು ಮಾಡಲಾಗಿದೆ ಎಂದರು.
ಹಜ್ ಯಾತ್ರೆಗೆ ಮುಸ್ಲಿಮ್ ಬಾಂಧವರಿಗೆ ಸಹಾಯಧನ ನೀಡುವಂತೆಯೇ ಹಿಂದೂಗಳ ಪವಿತ್ರ ಕ್ಷೇತ್ರವಾದ ಅಮರನಾಥ ತೀರ್ಥಯಾತ್ರೆಗೂ ಸಹಾಯ ಮಾಡುವಂತೆ ಹಲವು ಸಂಘಟನೆಗಳು ಆಗಾಗ ಕೇಂದ್ರ ಸರಕಾರವನ್ನು ಆಗ್ರಹಿಸುತ್ತಿವೆ.
|