8,000 ಕೋಟಿ ರೂಪಾಯಿಗಳ ನಷ್ಟ ಅನುಭವಿಸಿ ಸಂಕಷ್ಟದಲ್ಲಿರುವ ರಾಷ್ಟ್ರೀಯ ವಿಮಾನಯಾನ ಸಂಸ್ಥೆ ಏರ್ ಇಂಡಿಯಾದ ತನಿಖೆಯನ್ನು ಜಂಟಿ ಸದನ ಸಮಿತಿಗೆ ನೀಡಬೇಕೆಂದು ಲೋಕಸಭೆಯಲ್ಲಿ ಬಿಜೆಪಿ ಸದಸ್ಯರೊಬ್ಬರು ಆಗ್ರಹಿಸಿದ್ದಾರೆ.
ಅಲ್ಲದೆ ಖಾಸಗಿ ವಿಮಾನಯಾನ ಸಂಸ್ಥೆಗಳ ಕಾರ್ಯಚಟುವಟಿಕೆಗಳ ಮೇಲೆ ನಿಗಾವಹಿಸಲು ನಿಯಂತ್ರಣ ಪ್ರಾಧಿಕಾರವನ್ನು ರಚಿಸಬೇಕೆಂದು ಕಾಂಗ್ರೆಸ್ ಸದಸ್ಯರೊಬ್ಬರು ಇದೇ ಸಂದರ್ಭದಲ್ಲಿ ಒತ್ತಾಯಿಸಿದ್ದಾರೆ. ಪ್ರಯಾಣಿಕರನ್ನು ಇವು ಸುಲಿಗೆ ನಡೆಸುತ್ತಿವೆ ಎನ್ನುವುದು ಅವರ ಆರೋಪ.
ಇಂದು ಲೋಕಸಭೆಯಲ್ಲಿ ಜಂಟಿ ಸದನ ಸಮಿತಿ ತನಿಖೆಗೆ ಒತ್ತಾಯಿಸಿದವರು ಬಿಜೆಪಿ ಸಂಸದ ಶತ್ರುಘ್ನ ಸಿನ್ಹಾ. 'ಮಹಾರಾಜ'ನಾಗಿದ್ದ ಏರ್ ಇಂಡಿಯಾ 8,000 ಕೋಟಿ ರೂಪಾಯಿಗಳ ನಷ್ಟದೊಂದಿಗೆ 'ಭಿಕಾರಿ'ಯಾಗಲು ನಾಗರಿಕ ವಿಮಾನಯಾನ ಸಚಿವಾಲಯದ ಸಂಪೂರ್ಣ ಆಡಳಿತ ವೈಫಲ್ಯವೇ ಕಾರಣ ಎಂದೂ ಅವರು ಆರೋಪಿಸಿದ್ದಾರೆ.
ತಮ್ಮ ಮಧ್ಯಪ್ರವೇಶಕ್ಕೆ ಇದು ಸರಿಯಾದ ಸಮಯ ಎಂದು ಇದೇ ಸಂದರ್ಭದಲ್ಲಿ ಸಿನ್ಹಾರವರು ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ ಮತ್ತು ಪ್ರಣಬ್ ಮುಖರ್ಜಿಯವರತ್ತ ಬೊಟ್ಟು ಮಾಡುತ್ತಾ ಹೇಳಿದರು.
ಜಂಟಿ ಸದನ ಸಮಿತಿಯ ತನಿಖೆಯಿಂದಷ್ಟೇ ಪಾರದರ್ಶಕತೆಯನ್ನು ಕಾಪಾಡಿಕೊಳ್ಳಲು ಸಾಧ್ಯವೆಂದ ಅವರು ಏರ್ ಇಂಡಿಯಾವನ್ನು 'ಸಂಕಟ್ ಏರ್ಲೈನ್ಸ್' ಎಂದು ಛೇಡಿಸಿದರು.
|