ರಫ್ತು ಮಾಡಿದ ನಂತರವೂ ದೇಶದಲ್ಲಿ ಸಾಕಷ್ಟು ಖನಿಜ ಉಳಿಯುವುದರಿಂದ ಕಬ್ಬಿಣದ ಅದಿರು ರಫ್ತಿಗೆ ಯಾವುದೇ ನಿರ್ಬಂಧ ವಿಧಿಸಲಾಗುವುದಿಲ್ಲ ಎಂದು ಸರಕಾರ ತಿಳಿಸಿದೆ.
ರಾಜ್ಯಸಭೆಯ ಪ್ರಶ್ನೋತ್ತರ ವೇಳೆಯಲ್ಲಿ ಮಾತನಾಡುತ್ತಾ ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಆನಂದ ಶರ್ಮಾ ಈ ವಿಚಾರ ತಿಳಿಸಿದ್ದಾರೆ.
ಪ್ರಮುಖ ಖನಿಜಗಳಾದ ಕಬ್ಬಿಣದ ಅದಿರು, ಮ್ಯಾಗನೀಸ್ ಅದಿರು ಮತ್ತು ಕ್ರೋಮಿಯಂ ಅದಿರು ರಫ್ತಿನ ಮೇಲೆ ನಿರ್ಬಂಧ ವಿಧಿಸಬೇಕು ಎಂಬ ಬೇಡಿಕೆ ಆಗಾಗ ಕೇಳಿ ಬರುತ್ತಿದೆ ಎಂದು ಸಚಿವರು ಮಾತಿಗಾರಂಭಿಸಿದರು.
ಪ್ರಮಾಣಾತ್ಮಕ ಮತ್ತು ಗುಣಾತ್ಮಕ ನಿರ್ಬಂಧಗಳು ಮ್ಯಾಂಗನೀಸ್ ಮತ್ತು ಕ್ರೋಮ್ ಅದಿರುಗಳ ರಫ್ತುಗಳ ಮೇಲೆ ಈಗಾಗಲೇ ಇದೆ. ಕಬ್ಬಿಣದ ಅದಿರಿಗೆ ಸಂಬಂಧಿಸಿದಂತೆ ಶೇಕಡಾ 64ಕ್ಕಿಂತಲೂ ಕಬ್ಬಿಣ ವಸ್ತುಗಳ ಅದಿರಿನ ತುಂಡುಗಳು ಮತ್ತು ಕಣಗಳಿದ್ದಲ್ಲಿ ರಫ್ತಿಗೆ ಅವಕಾಶ ನೀಡುವುದಿಲ್ಲ ಎಂದು ಅವರು ತಿಳಿಸಿದ್ದಾರೆ.
ರಾಷ್ಟ್ರದ ಸಂಪತ್ತನ್ನು ರಕ್ಷಿಸುವ ನಿಟ್ಟಿನಲ್ಲಿ ಸರಕಾರವು ಯಾವುದೇ ರೀತಿಯ ರಿಯಾಯಿತಿ ತೋರಿಸುವುದಿಲ್ಲ ಎಂಬುವುದನ್ನು ಸ್ಪಷ್ಟಪಡಿಸಿರುವ ಶರ್ಮಾ, "ಉತ್ಕೃಷ್ಟ ಅದಿರನ್ನು ರಕ್ಷಿಸುವ ನಿಟ್ಟಿನಲ್ಲಿ ಬೈಲಾದಿಲಾ ಕಬ್ಬಿಣದ ಅದಿರಿಗೆ ಪ್ರಮಾಣಾತ್ಮಕ ನಿರ್ಬಂಧಗಳಿವೆ. ಶೇಕಡಾ 64ಕ್ಕಿಂತಲೂ ಕಡಿಮೆ ಕಬ್ಬಿಣದ ಅದಿರಿನ ತುಂಡುಗಳು ಮತ್ತು ಕಣಗಳಿರುವ ಕಬ್ಬಿಣದ ಅದಿರನ್ನು ರಫ್ತು ಮಾಡುವುದಕ್ಕೆ ಯಾವುದೇ ನಿರ್ಬಂಧಗಳಿಲ್ಲ" ಎಂದರು.
|