ಆರ್ಥಿಕ ಸಂಕಷ್ಟಕ್ಕೊಳಗಾಗಿರುವ ರಾಷ್ಟ್ರೀಯ ವಿಮಾನಯಾನ ಸಂಸ್ಥೆ ಏರ್ ಇಂಡಿಯಾಕ್ಕೆ ಉತ್ಕೃಷ್ಟ ಮಟ್ಟದ ಸಮಿತಿ ರಚಿಸುವುದಕ್ಕೂ ಮೊದಲು ಅಭಿವೃದ್ಧಿಯತ್ತ ಸಾಗಲು ಯೋಜನೆ ರೂಪಿಸುವಂತೆ ಎಸ್ಬಿಐ ಪ್ರಮುಖರನ್ನು ಸರಕಾರ ನೇಮಕಗೊಳಿಸಿದೆ.
"ನಾವು ಭಾರತೀಯ ಸ್ಟೇಟ್ ಬ್ಯಾಂಕ್ ಪ್ರಮುಖರನ್ನು ನೇಮಕಗೊಳಿಸಿದ್ದೇವೆ. ಏರ್ ಇಂಡಿಯಾದ ಪುನಶ್ಚೇತನಕ್ಕೆ ಅತ್ಯಲ್ಪ, ಮಧ್ಯಮ ಮತ್ತು ಸುದೀರ್ಘಾವಧಿಯ ಯಾವ ಯೋಜನೆಗಳು ಸೂಕ್ತವಾಗುತ್ತವೆ ಎಂಬ ಬಗ್ಗೆ ನಾವು ಶೀಘ್ರದಲ್ಲೇ ಪ್ರತಿಕ್ರಿಯೆ ಪಡೆಯಲಿದ್ದೇವೆ" ಎಂದು ಇಂಡಿಯಾ ಏವಿಯೇಷನ್ 2010 ಅಂತಾರಾಷ್ಟ್ರೀಯ ಪ್ರದರ್ಶನ ಕಾರ್ಯಕ್ರಮದಲ್ಲಿ ಮಾತನಾಡುತ್ತಾ ನಾಗರಿಕ ವಿಮಾನಯಾನ ಸಚಿವ ಪ್ರಫುಲ್ ಪಟೇಲ್ ತಿಳಿಸಿದ್ದಾರೆ.
ರಾಷ್ಟ್ರೀಯ ವಿಮಾನಯಾನ ಸಂಸ್ಥೆಯು ಶೀಘ್ರದಲ್ಲೇ ಸಂಘಟನಾತ್ಮಕ ಪುನರ್ರಚನಾ ಯೋಜನೆಯನ್ನು ಪಡೆದುಕೊಳ್ಳಲಿದ್ದು, ಕೆಲವೇ ಸಮಯದಲ್ಲಿ ಪ್ರಮುಖ ಬದಲಾವಣೆಗಳಿಗೊಳಪಡಿಸಲಾಗುತ್ತದೆ ಎಂದು ಸಚಿವರು ಇದೇ ಸಂದರ್ಭದಲ್ಲಿ ಮುನ್ಸೂಚನೆ ನೀಡಿದ್ದಾರೆ.
"ನಾವು ಆಡಳಿತ ವ್ಯವಸ್ಥೆಯಲ್ಲಿ ಪ್ರಮುಖ ಬದಲಾವಣೆಗಳನ್ನು ಮಾಡಲಿದ್ದೇವೆ. ಏರ್ ಇಂಡಿಯಾದ ಆಡಳಿತ ಮಂಡಳಿಯಲ್ಲಿ ಹಲವು ಪ್ರಮುಖ ಮತ್ತು ಪ್ರಸಿದ್ಧರನ್ನು ತರಲಿದ್ದೇವೆ. ವಿಶ್ವದಾದ್ಯಂತ ತನ್ನ ನೆಲೆಯನ್ನು ಭದ್ರಪಡಿಸುವ ಉದ್ದೇಶದಿಂದ ಅಂತಾರಾಷ್ಟ್ರೀಯ ಸಲಹಾ ಮಂಡಳಿಯನ್ನು ಕೂಡ ನಾವು ಸ್ಥಾಪಿಸಲಿದ್ದೇವೆ" ಎಂದು ಪಟೇಲ್ ತಿಳಿಸಿದ್ದಾರೆ.
ಅಲ್ಲದೆ ಅಧ್ಯಕ್ಷರು ಮತ್ತು ವ್ಯವಸ್ಥಾಪಕ ನಿರ್ದೇಶಕರಡಿಯಲ್ಲಿ ಕಾರ್ಯನಿರ್ವಹಿಸುವ ಪ್ರಮುಖ ಕಾರ್ಯಾಧಿಕಾರಿ (ಸಿಓಓ)ಯನ್ನು ಹೊಂದುವ ಉದ್ದೇಶವೂ ನಮ್ಮಲ್ಲಿದೆ. ಆ ಮೂಲಕ ವಿಮಾನಯಾನ ಸಂಸ್ಥೆಯನ್ನು ಅತ್ಯುತ್ತಮ ತಂಡದೊಂದಿಗೆ ನಡೆಸಲಿದ್ದೇವೆ. ಇವೆಲ್ಲವೂ ಸಂಪೂರ್ಣವಾಗಿ ಜಾರಿಗೆ ಬರಬೇಕಿದ್ದರೆ ವರ್ಷಗಳೇ ಬೇಕಾಗಬಹುದು ಎಂದು ವಿವರಿಸಿದರು.
|