ಮಳೆ ತೀವ್ರ ಅಭಾವವನ್ನೆದುರಿಸುತ್ತಿರುವ ಉತ್ತರ ಪ್ರದೇಶದ 20 ಜಿಲ್ಲೆಗಳನ್ನು ಬರಪೀಡಿತ ಎಂದು ಘೋಷಿಸಲಾಗುತ್ತದೆ ಎಂದು ರಾಜ್ಯ ಸರಕಾರ ತಿಳಿಸಿದ್ದು, ಪರಿಸ್ಥಿತಿ ಬದಲಾಗದಿದ್ದರೆ ಇನ್ನೂ ಹತ್ತಾರು ಜಿಲ್ಲೆಗಳನ್ನು ಇದೇ ಪಟ್ಟಿಗೆ ಸೇರಿಸಲಾಗುತ್ತದೆ ಎಂದಿದೆ.
"ಪೂರ್ವ ಹಾಗೂ ಮಧ್ಯ ಉತ್ತರ ಪ್ರದೇಶದಲ್ಲಿ ತೀವ್ರ ತೊಂದರೆಗೊಳಗಾಗಿರುವ 20 ಜಿಲ್ಲೆಗಳನ್ನು ನಾವೀಗ ಬರಪೀಡಿತ ಜಿಲ್ಲೆಗಳೆಂದು ಗುರುತಿಸಿದ್ದೇವೆ. ಮುಂದಿನ ದಿನಗಳಲ್ಲಿ ಮಳೆ ಬರದೆ ಇದೇ ಪರಿಸ್ಥಿತಿ ಮುಂದುವರಿದಲ್ಲಿ ಮೂರು ಡಜನ್ಗಳಷ್ಟು ಜಿಲ್ಲೆಗಳನ್ನು ಬರಪೀಡಿತ ಎಂದು ಪರಿಗಣಿಸಬೇಕಾಗುತ್ತದೆ" ಎಂದು ಸರಕಾರದ ವಕ್ತಾರರು ತಿಳಿಸಿದ್ದಾರೆ.
"ಬರಪೀಡಿತ ಎಂದು ಗುರುತಿಸಲಾಗಿರುವ ಜಿಲ್ಲೆಗಳಲ್ಲಿನ ಸಾಲ ಮರುಪಾವತಿ ಮತ್ತು ಇತರ ಭೂ ಆದಾಯ ಆದೇಶಗಳ ತಕ್ಷಣ ಅಮಾನತಿಗೆ ಶನಿವಾರ ಆದೇಶ ಹೊರಡಿಸಲಾಗುವುದು" ಎಂದೂ ಅವರು ತಿಳಿಸಿದ್ದಾರೆ.
ಮುಖ್ಯ ಕಾರ್ಯದರ್ಶಿ ಅತುಲ್ ಕುಮಾರ್ ಗುಪ್ತಾ ಅಧ್ಯಕ್ಷತೆಯಲ್ಲಿ ಶುಕ್ರವಾರ ರಾತ್ರಿ ನಡೆದ ಸಭೆಯಲ್ಲಿ ಈ ತೀರ್ಮಾನವನ್ನು ತೆಗೆದುಕೊಳ್ಳಲಾಗಿದ್ದು, ಬರಪೀಡಿತ ಜಿಲ್ಲೆಗಳ ಅಧಿಕೃತ ಘೋಷಣೆಯನ್ನು ಸರಕಾರ ಶನಿವಾರ ಮಾಡಲಿದೆ.
ಬಾಲಿಯಾ, ಮಾವು, ಗಾಝಿಪುರ್, ಬಸ್ತಿ, ದಿಯೋರಿಯಾ, ಸಂತ್ ಕಬ್ರಿನಗರ್, ಅಂಬೇಡ್ಕರ್ ನಗರ, ಜುವಾನ್ಪುರ್, ಸುಲ್ತಾನ್ಪುರ್, ರಾಯ್ ಭರೇಲಿ, ಉನಾವೋ, ಹರ್ದೋಯಿ, ಫಾರುಖ್ಬಾದ್, ಮೈನ್ಪುರಿ, ಕಾನ್ಪುರ ಗ್ರಾಮಾಂತರ, ಪತೇಪುರ್, ಕಾನ್ಶಿರಾಮ್ ನಗರ್, ಹತ್ರಾಸ್, ಬರೇಲಿ ಮತ್ತು ಕಾನುವಾಜ್ ಜಿಲ್ಲೆಗಳನ್ನು ಬರಪೀಡಿತ ಎಂದು ಗುರುತಿಸಲಾಗಿದೆ.
ಉತ್ತರ ಪ್ರದೇಶದ 71 ಜಿಲ್ಲೆಗಳಲ್ಲಿ ಕೇವಲ 12 ಜಿಲ್ಲೆಗಳಲ್ಲಿ ಮಾತ್ರ ಮಳೆಯಾಗಿರುವುದರಿಂದ ಮುಂಗಾರು ಪ್ರಮಾಣ ಶೇಕಡಾ 80ರಷ್ಟು ಕುಸಿದಿದೆ. ಈ ಕಾರಣದಿಂದ ಉತ್ತರ ಪ್ರದೇಶವನ್ನು ಬರಪೀಡಿತ ರಾಜ್ಯ ಎಂದು ಘೋಷಿಸಬೇಕು ಎಂದು ವಿರೋಧ ಪಕ್ಷಗಳು ಒತ್ತಾಯಿಸಿದ್ದವು.
|