ಜ್ವರ ಬಂದಿದ್ದು ಕೋಣನಿಗೆ, ಬರೆ ಹಾಕಿದ್ದು ಎತ್ತಿಗೆ ಎಂಬ ಗಾದೆಯೀಗ ಸಮಯೋಚಿತ. ಊರಿಗೆ ಮಳೆ ಬಾರದಿದ್ದದ್ದಕ್ಕೆ ಮನೆಯೊಳಗೆ ಕುಂತಿದ್ದ ಅವಿವಾಹಿತ ಹೆಣ್ಮಕ್ಕಳನ್ನು ಬೆತ್ತಲೆಯಾಗಿ ಉಳುಮೆ ಮಾಡಿಸಿದ್ದಾರೆ ಬಿಹಾರದ ರೈತರು. ಆ ಮಟ್ಟಿಗೆ ಕಪ್ಪೆಯ ಮದುವೆಗಿಂತಲೂ ಇವರದ್ದು ಒಂದು ಹೆಜ್ಜೆ ಮುಂದೆ.
ಮುಂಗಾರು ಮಳೆಯ ಅಭಾವದಿಂದ ರೈತರು ಬಿತ್ತನೆ ಮಾಡಲಾಗದೆ ದೇಶದ ಹಲವು ಭಾಗಗಳಲ್ಲಿ ತೊಂದರೆಗೊಳಗಾಗಿದ್ದಾರೆ. ಆದರೆ ಬಿಹಾರದ ರೈತರು ಇದನ್ನು ಪರಿಹರಿಸಲು ಕಂಡುಕೊಳ್ಳುವ ಮಾರ್ಗ ಮಾತ್ರ ವಿಚಿತ್ರವಾದದ್ದು.
ಬಾಲೆಯರನ್ನು ಬೆತ್ತಲೆ ನೋಡಿದ ದೇವರು ಅವಮಾನಕ್ಕೊಳಗಾಗಿ ಭಾರೀ ಮಳೆ ಸುರಿಸುತ್ತಾನೆ ಎಂಬ ಬಿಹಾರಿಗಳ ನಂಬಿಕೆಯ ಆಚರಣೆ ಇದೇನೂ ಹೊಸತಲ್ಲ. ಹಲವಾರು ವರ್ಷಗಳಿಂದ ನಡೆದುಕೊಂಡು ಬಂದಿದೆಯಂತೆ..!
ಬಿಹಾರದಲ್ಲಿ ಸೂರ್ಯಾಸ್ತದ ನಂತರ ಅವಿವಾಹಿತ ಹೆಣ್ಣು ಮಕ್ಕಳನ್ನು ಗದ್ದೆಗಳಿಗೆ ಇಳಿಸಲಾಯಿತು. ಅವರು ದೇವರ ಸ್ತೋತ್ರಗಳನ್ನು ಹಾಡುತ್ತಾ, ಬೆತ್ತಲೆಯಾಗಿ ನೇಗಿಲು ಹಿಡಿದು ಉಳುಮೆ ಮಾಡಿದರು. ಗ್ರಾಮದ ಹಿರಿಯ ಮಹಿಳೆಯರು ಹುಡುಗಿಯರನ್ನು ಬೆತ್ತಲೆಯಾಗಿ ಉಳುಮೆ ಮಾಡುವಂತೆ ಒತ್ತಾಯಿಸಿ ಕರೆತಂದರು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
"ಈ ರೀತಿ ಮಾಡುವುದರಿಂದ ವರುಣ ದೇವ ಮುಜುಗರಪಟ್ಟುಕೊಂಡು ಧಾರಾಕಾರ ಮಳೆ ಸುರಿಸುತ್ತಾನೆ. ಹಾಗಾಗಿ ಭರ್ಜರಿ ಬೆಳೆ ತೆಗೆಯಬಹುದು ಎಂಬುದು ಗ್ರಾಮಸ್ಥರ ನಂಬಿಕೆ" ಎಂದು ಗ್ರಾಮ ಲೆಕ್ಕಿಗ ಉಪೇಂದ್ರ ಕುಮಾರ್ ತಿಳಿಸಿದ್ದಾರೆ.
ಇದು ಈ ವಲಯದ ಸಾಮಾಜಿಕ ನಂಬಿಕೆಯ ಪ್ರಶ್ನೆ. ಧಾರಾಕಾರ ಮಳೆ ಸುರಿಯುವವರೆಗೂ ಗ್ರಾಮದ ಜನರು ಇಂತಹ ಆಚರಣೆಯನ್ನು ಮುಂದುವರಿಸುತ್ತಾರೆ ಎಂದು ಅವರು ವಿವರಿಸಿದರು.
|