ಖಾದ್ಯ ತೈಲದ ದೇಶೀಯ ಉತ್ಪಾದನೆಯು ಬೇಡಿಕೆಯನ್ನು ಮುಟ್ಟದ ಕಾರಣ, ವ್ಯತ್ಯಾಸವನ್ನು ಸರಿದೂಗಿಸುವ ಸಲುವಾಗಿ ವಿದೇಶದಿಂದ ಆಮದು ಮಾಡಿಕೊಳ್ಳಲು ಅವಕಾಶ ನೀಡಿದೆ ಎಂದು ಸರಕಾರ ಲೋಕಸಭೆಗೆ ವಿವರಿಸಿದೆ.
ದೇಶೀಯವಾಗಿ ಖಾದ್ಯ ತೈಲದ ಉತ್ಪಾದನೆಯನ್ನು ಹೆಚ್ಚಿಸಲು ಸರಕಾರವು ಹಲವು ಕ್ರಮಗಳನ್ನು ಕೈಗೊಂಡಿದೆ ಎಂದು ಕೂಡ ಇದೇ ಸಂದರ್ಭದಲ್ಲಿ ಗ್ರಾಹಕರ ವ್ಯವಹಾರಗಳು, ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಶರದ್ ಪವಾರ್ ತಿಳಿಸಿದ್ದಾರೆ.
ಪ್ರೋತ್ಸಾಹದ ನಿಟ್ಟಿನಲ್ಲಿ ಗರಿಷ್ಠ ಬೆಲೆಯನ್ನು ರಾಜ್ಯಗಳ ಪ್ರಮುಖ ತೈಲ ಬೀಜಗಳ ಬೆಳೆಗಾರರಿಗೆ ನೀಡಲಾಗುತ್ತಿದೆ. ಅಲ್ಲದೆ ತೈಲ ಬೀಜಗಳ ರಕ್ಷಣೆಗೆ ಸುಧಾರಿತ ತಂತ್ರಜ್ಞಾನ ಬಳಸಲಾಗುತ್ತಿದೆ. ಈ ಸಂಬಂಧ ಅಧ್ಯಯನ ಮತ್ತು ಅಭಿವೃದ್ಧಿಗೂ ಒತ್ತು ನೀಡಲಾಗಿದೆ. ಹೆಚ್ಚು ಇಳುವರಿ ಪಡೆಯುವುದು ಇದರ ಹಿಂದಿನ ಉದ್ದೇಶ ಎಂದು ಅವರು ವಿವರಿಸಿದ್ದಾರೆ.
ಆಮದು ಮಾಡಿಕೊಂಡ ಖಾದ್ಯ ತೈಲವನ್ನು ಕಾಯ್ದಿರಿಸುವ ಯಾವುದೇ ಪ್ರಸ್ತಾಪ ಸರಕಾರದ ಪರಿಗಣನೆಯಲ್ಲಿಲ್ಲ ಎಂದು ಸಚಿವರು ಇದೇ ಸಂದರ್ಭದಲ್ಲಿ ಸ್ಪಷ್ಟಪಡಿಸಿದರು.
ಮತ್ತೂ ಮಾತು ಮುಂದುವರಿಸಿದ ಅವರು, ಇದು ಕೇವಲ ತೈಲಬೀಜಗಳ ಉತ್ಪಾದನೆ ಪ್ರಶ್ನೆಯಲ್ಲ. ಅದೇ ಹೊತ್ತಿಗೆ ಗ್ರಾಹಕರಿಂದ ಬೇಡಿಕೆ ಹೆಚ್ಚಿರುವುದು ಕೂಡ ಕಾರಣವಾಗಿದೆ. ಪ್ರಸಕ್ತ ದೇಶೀಯ ಉತ್ಪಾದನೆ ಏರುಗತಿಯಲ್ಲಿದೆ ಎಂದರು.
ವರ್ಷದಿಂದ ವರ್ಷಕ್ಕೆ ಸಾಗುವಳಿ ಭೂಮಿಯನ್ನು ಕೃಷಿಯೇತರ ಉದ್ದೇಶಗಳಿಗಾಗಿ ಬಳಸುವುದು ಹೆಚ್ಚಾಗುತ್ತಿದೆ. ಜತೆಗೆ ಜನಸಂಖ್ಯಾ ಏರಿಕೆಯನ್ನೂ ಗಮನದಲ್ಲಿ ಇಟ್ಟುಕೊಳ್ಳಬೇಕಾಗುತ್ತದೆ. ಈ ಸಮಸ್ಯೆಗಳನ್ನು ಮೀರಿ ನಿಲ್ಲಬೇಕಾದರೆ ಕೃಷಿಯಲ್ಲಿ ಸುಧಾರಿತ ತಂತ್ರಜ್ಞಾನಗಳ ಅಗತ್ಯವಿದೆ ಎಂದು ಪವಾರ್ ತಿಳಿಸಿದ್ದಾರೆ.