ಭಾರತವು 21.4 ಕೋಟಿ ಹಸಿವೆಯಿಂದ ಬಳಲುತ್ತಿರುವ ಜನತೆಯನ್ನು ಹೊಂದುವ ಮೂಲಕ ಈ ವಿಚಾರದಲ್ಲಿ ವಿಶ್ವಕ್ಕೇ ರಾಜಧಾನಿಯಾಗಿ ಮಾರ್ಪಟ್ಟಿದೆ ಎಂದು ಸರಕಾರೇತರ ಸಂಸ್ಥೆ 'ನವಧಾನ್ಯ'ದ ವಂದನಾ ಶಿವ ತಿಳಿಸಿದ್ದಾರೆ.
ಭಾರತದಲ್ಲಿ ಹಸಿವೆಯಿಂದ ಬಳಲುತ್ತಿರುವಷ್ಟು ಜನರನ್ನು ಬೇರೆ ಯಾವ ರಾಷ್ಟ್ರದಲ್ಲೂ ಕಾಣಲಾಗದು. ಇಲ್ಲಿ 21.4 ಕೋಟಿ ಮಂದಿ ಆಹಾರ ಪಡೆಯುವ ಹಕ್ಕುಗಳಿಂದ ವಂಚಿತರಾಗಿದ್ದಾರೆ ಎಂದು ಶಿವ ವಿವರಿಸಿದರು.
ಆಫ್ರಿಕಾ ಉಪಖಂಡದಲ್ಲಿ ಹಸಿವೆಯಿಂದಿರುವವರ ಸಂಖ್ಯೆಗಿಂತಲೂ ಹೆಚ್ಚು ಈ ದೇಶದಲ್ಲಿ ಉಪವಾಸ ಬೀಳುತ್ತಿರುವ ಒಟ್ಟು ಜನಸಂಖ್ಯೆ ಹೆಚ್ಚಾಗಿದೆ ಎಂದಿದ್ದಾರೆ. ಒಟ್ಟಾರೆ ಸರಾಸರಿಯಲ್ಲಿ ಭಾರತ ಗರಿಷ್ಠವಲ್ಲದಿದ್ದರೂ ಒಟ್ಟು ಜನಸಂಖ್ಯೆಯನ್ನು ಲೆಕ್ಕಕ್ಕೆ ತೆಗೆದುಕೊಂಡಾಗ ಭಾರತವೇ ಅಗ್ರ ಸ್ಥಾನದಲ್ಲಿದೆ.
ಜಾಗತಿಕ ಹಸಿವೆಯ ಸೂಚ್ಯಂಕದ 118 ರಾಷ್ಟ್ರಗಳ ಪೈಕಿ ಭಾರತವು 94ನೇ ಸ್ಥಾನವನ್ನು ಪಡೆದುಕೊಂಡಿದೆ. 2008ರಲ್ಲಿ ಭಾರತ 66 ಹಾಗೂ ಪಾಕಿಸ್ತಾನವು 61ನೇ ಸ್ಥಾನ ಪಡೆದಿತ್ತು. ಈ ಸೂಚ್ಯಂಕದ ಪ್ರಕಾರ 2008ರಲ್ಲಿ ಪಾಕಿಸ್ತಾನದಲ್ಲಿನ ಹಸಿವೆಯಿಂದ ಬಳಲುತ್ತಿರುವವರ ಸಂಖ್ಯೆ ಸರಾಸರಿಯಲ್ಲಿ ಭಾರತಕ್ಕಿಂತ ಕಡಿಮೆ.
ಇದನ್ನು ವಿವರಿಸುತ್ತಾ ಶಿವ, ಪೌಷ್ಠಿಕಾಂಶಗಳ ಕೊರತೆಯಿಂದಾಗಿ ಭಾರತದಲ್ಲಿ 5.7 ಕೋಟಿ ಮಕ್ಕಳು ಕಡಿಮೆ ತೂಕವನ್ನು ಹೊಂದಿವೆ. ಇದು ಇಡೀ ವಿಶ್ವದಲ್ಲೇ ಕಡಿಮೆ ತೂಕ ಹೊಂದಿರುವ ಮೂರನೇ ಒಂದು ಭಾಗ ಎಂದಿದ್ದಾರೆ.
ಸರಕಾರವು ಹಣದುಬ್ಬರ ದರವನ್ನು ಋಣಾತ್ಮಕ ಗತಿಯಲ್ಲಿದೆ ಎಂದು ತೋರಿಸುತ್ತಿದ್ದರೂ 2003ರಿಂದ 2008ರ ಅವಧಿಯಲ್ಲಿ ಆಹಾರ ಪದಾರ್ಥಗಳ ಬೆಲೆಯು ಶೇ.50ರಿಂದ 100ರಷ್ಟು ಏರಿಕೆ ಕಂಡಿರುವುದು ವಾಸ್ತವ. ವಸೂಲಿ ಮತ್ತು ಚಿಲ್ಲರೆ ವಿಭಾಗದಲ್ಲಿನ ಕಾರ್ಪೊರೇಟ್ ಸಂಸ್ಥೆಗಳು ಆಹಾರ ವ್ಯವಸ್ಥೆಯನ್ನು ನಿಯಂತ್ರಿಸುತ್ತಿರುವುದರಿಂದ ಆಹಾರ ವಸ್ತುಗಳ ಬೆಲೆಯೇರಲು ಕಾರಣವಾಗಿದೆ ಎಂದೂ ಅವರು 'ಪ್ರತಿ ನಾಲ್ಕನೇ ಭಾರತೀಯ ಹಸಿವೆಯಿಂದ ಯಾಕೆ ಬಳಲುತ್ತಾನೆ?' ಎಂಬ ವರದಿಯಲ್ಲಿ ತಿಳಿಸಿದ್ದಾರೆ.