ಸರಕಾರಿ ವಲಯದಲ್ಲಿ ಮಾತ್ರ ಕಾಣಿಸಿಕೊಳ್ಳುತ್ತಿದ್ದ ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆ (ಸಿಐಎಸ್ಎಫ್) ಸುಪರ್ದಿಗೆ ಸಾಫ್ಟ್ವೇರ್ ದೈತ್ಯ ಇನ್ಫೋಸಿಸ್ ಕೂಡ ಇಂದು ಸೇರಿಕೊಳ್ಳುವುದರೊಂದಿಗೆ, ಈ ರಕ್ಷಣೆ ಪಡೆದ ದೇಶದ ಮೊದಲ ಖಾಸಗಿ ಸಂಸ್ಥೆ ಎಂಬ ಹೆಗ್ಗಳಿಕೆಗೆ ಕಂಪನಿ ಪಾತ್ರವಾಗಿದೆ.
ಇನ್ಫೋಸಿಸ್ ಸಂಸ್ಥೆಯ ಸಂಸ್ಥಾಪಕ, ಅಧ್ಯಕ್ಷ ಹಾಗೂ ಮುಖ್ಯ ಸಲಹೆಗಾರರಾಗಿರುವ ಎನ್.ಆರ್. ನಾರಾಯಣ ಮೂರ್ತಿಯವರು ಸಿಐಎಸ್ಎಫ್ನ ಧ್ವಜ ಹಾರಿಸುವ ಮೂಲಕ ಸೇವೆಗೆ ಚಾಲನೆ ನೀಡಿದ ನಂತರ ಸಿಐಎಸ್ಎಫ್ನಿಂದ ಗೌರವ ಸ್ವೀಕರಿಸಿದರು. ಇದೇ ವೇಳೆ ಇನ್ಫೋಸಿಸ್ ಕೀಲಿ ಕೈಗಳನ್ನು ಅಧಿಕಾರಿಗಳಿಗೆ ಹಸ್ತಾಂತರಿಸಲಾಯಿತು.
ಬೆಂಗಳೂರಿನಲ್ಲಿ ಪ್ರಧಾನ ಕಚೇರಿ ಹೊಂದಿರುವ ಇನ್ಫೋಸಿಸ್ ಭಯೋತ್ಪಾದಕರ ವಿಧ್ವಂಸಕ ಪಟ್ಟಿಯಲ್ಲಿದೆ ಎಂಬ ವರದಿಗಳ ಹಿನ್ನಲೆಯಲ್ಲಿ ಅಗತ್ಯ ಭದ್ರತೆ ನೀಡುವಂತೆ ಸಂಸ್ಥೆಯು ಕೇಂದ್ರ ಗೃಹ ಸಚಿವಾಲಯಕ್ಕೆ ಕೋರಿಕೆ ಸಲ್ಲಿಸಿತ್ತು.
ಇನ್ಫೋಸಿಸ್ಗೆ ಒಟ್ಟು 101 ಸಿಐಎಸ್ಎಫ್ ಸಿಬ್ಬಂದಿಗಳನ್ನು ಕೇಂದ್ರ ಒದಗಿಸಲಿದೆ. ಇದನ್ನು ಮೂರು ಹಂತದಲ್ಲಿ ಪೂರೈಸಲಾಗುತ್ತದೆ ಎಂದು ಮೂಲಗಳು ತಿಳಿಸಿವೆ.
ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆಯ ಸಿಬ್ಬಂದಿಗಳಿಗಾಗಿ ಇನ್ಫೋಸಿಸ್ ವಾರ್ಷಿಕ 2.5 ಕೋಟಿ ರೂಪಾಯಿಗಳನ್ನು ವ್ಯಯಿಸಬೇಕಾಗಿದೆ. ಮುಂಬೈ ಉಗ್ರರ ದಾಳಿಯ ನಂತರ ಇದೇ ರೀತಿಯ ಭದ್ರತೆ ತಮಗೂ ಬೇಕೆಂದು ಹಲವು ಖಾಸಗಿ ಕಂಪನಿಗಳು ಕೇಂದ್ರಕ್ಕೆ ಮನವಿ ಸಲ್ಲಿಸಿವೆ.
ಇನ್ಫೋಸಿಸ್ ಆವರಣದಲ್ಲಿ ನಡೆದ ಸಮಾರಂಭದಲ್ಲಿ ಸಿಐಎಸ್ಎಫ್ ಮುಖ್ಯಸ್ಥ ಆರ್.ಕೆ. ಮಿಶ್ರಾ, ಇನ್ಫೋಸಿಸ್ ಸ್ಥಾಪಕ ನಾರಾಯಣ ಮೂರ್ತಿ, ಮಂಡಳಿ ಸದಸ್ಯ ಮೋಹನದಾಸ್ ಪೈ ಮುಂತಾದವರು ಭಾಗವಹಿಸಿದ್ದರು.