ಆರ್ಥಿಕ ಕುಸಿತದಿಂದ ಬಳಲುತ್ತಿರುವ ಚರ್ಮೋದ್ಯಮ ಹಾಗೂ ಜವಳಿ ಕ್ಷೇತ್ರಕ್ಕೆ ನೀಡಲಾಗಿರುವ ರಫ್ತು ಸಾಲ ಯೋಜನೆ ರಿಯಾಯತಿಗಳನ್ನು ಮುಂದವರಿಯಲಿವೆ ಎಂದು ವಾಣಿಜ್ಯ ಮತ್ತು ಕೈಗಾರಿಕೆ ಸಚಿವ ಆನಂದ್ ಶರ್ಮಾ ತಿಳಿಸಿದ್ದಾರೆ.
ತೆರಿಗೆ ರಿಯಾಯತಿ ಕುರಿತಂತೆ ವಿತ್ತಸಚಿವ ಪ್ರಣಬ್ ಮುಖರ್ಜಿಯವರೊಂದಿಗೆ ಚರ್ಚಿಸುವುದಾಗಿ ಸಚಿವ ಆನಂದ್ ಶರ್ಮಾ ತಿಳಿಸಿದ್ದಾರೆ.
ಚರ್ಮೋದ್ಯಮ ಸೇರಿದಂತೆ ಕೆಲ ಕ್ಷೇತ್ರಗಳು ನಿರಂತರವಾಗಿ ಆರ್ಥಿಕ ಸಂಕಷ್ಟವನ್ನು ಎದುರಿಸುತ್ತಿವೆ. ವಿತ್ತಸಚಿವರೊಂದಿಗೆ ಮಾತುಕತೆ ನಡೆಸಲಾಗುವುದು. ಹಾಗೂ ರಫ್ತು ವಹಿವಾಟು ಸಾಲವನ್ನು ಶೇ.2ರಷ್ಟು ಬಡ್ಡಿ ದರದಲ್ಲಿ ನೀಡುವಂತೆ ಮನವಿ ಮಾಡಲಾಗುವುದು ಎಂದು ಸುದ್ದಿಗಾರರಿಗೆ ತಿಳಿಸಿದ್ದಾರೆ.
ಮುಂಬರುವ ಮಾರ್ಚ್ 2010ಕ್ಕೆ ರಫ್ತು ವಹಿವಾಟಿಗೆ ನೀಡುತ್ತಿರುವ ಶೇ.2ರ ಬಡ್ಡಿ ದರ ಯೋಜನೆ ಅಂತ್ಯಗೊಳ್ಳಲಿದ್ದು,ಕರಕೌಶಲ ಹ್ಯಾಂಡ್ಲ್ಯೂಮ್ ಜವಳಿ, ವಜ್ರ, ಆಭರಣ ರಫ್ತು ವಹಿವಾಟು ಕ್ಷೇತ್ರಕ್ಕೆ ವಿಸ್ತರಿಸುವ ಸಾಧ್ಯತೆಗಳಿವೆ ಎಂದು ವಾಣಿಜ್ಯ ಸಚಿವ ಆನಂದ್ ಶರ್ಮಾ ತಿಳಿಸಿದ್ದಾರೆ.