ಇಂಧನ ದರ ಏರಿಕೆ ಘೋಷಣೆಗೆ ತಮ್ಮ ಸಂಪೂರ್ಣ ಬೆಂಬಲವಿದ್ದು, ವಿತ್ತಸಚಿವ ಪ್ರಣಬ್ ಮುಖರ್ಜಿ ಉತ್ತಮ ಬಜೆಟ್ ಮಂಡಿಸಿದ್ದಾರೆ ಎಂದು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ತಮ್ಮ ಸಂದೇಶವನ್ನು ರವಾನಿಸಿದ್ದಾರೆ.
ನಮಗೆ ಹಲವಾರು ಅಗತ್ಯವಾದ ಸಾಮಾಜಿಕ ಹೊಣೆಗಳಿದ್ದು, ಗುರಿಗಳನ್ನು ತಲುಪಲು ಸಂಪನ್ಮೂಲಗಳನ್ನು ಹೆಚ್ಚಿಸುವುದು ಅನಿವಾರ್ಯವಾಗಿದೆ. ಸಾರ್ವತ್ರಿಕವಾಗಿ ಜನಮನ್ನಣೆ ಪಡೆದ ಸಮತೋಲನ ಬಜೆಟ್ ಮಂಡಿಸಿದ ಮುಖರ್ಜಿಯವರಿಗೆ ಕಾಂಗ್ರೆಸ್ ಸಂಸದೀಯ ಸಮಿತಿ ಅಭಿನಂದಿಸುತ್ತದೆ ಎಂದು ಶ್ಲಾಘಿಸಿದ್ದಾರೆ.
ಇಂಧನ ದರ ಏರಿಕೆ ಕುರಿತಂತೆ, ಯುಪಿಎ ಮೈತ್ರಿ ಕೂಟದ ಪಕ್ಷಗಳು ಹಾಗೂ ವಿರೋಧ ಪಕ್ಷಗಳು ವಿರೋಧಿಸುತ್ತಿರುವ ಬಗ್ಗೆ ಹೇಳಿಕೆ ನೀಡಲು ಸೋನಿಯಾ ಗಾಂಧಿ ನಿರಾಕರಿಸಿ, ಅಗತ್ಯ ವಸ್ತುಗಳ ದರ ಏರಿಕೆ ನಿಯಂತ್ರಣಕ್ಕೆ ಹೆಚ್ಚಿನ ಆದ್ಯತೆ ನೀಡುವುದು ನಮ್ಮ ಕರ್ತವ್ಯವಾಗಿದೆ ಎಂದರು.
ಬಜೆಟ್ ಮಂಡನೆಯಲ್ಲಿ ಪ್ರಜಾಪ್ರಭುತ್ವ ನೀತಿಗಳು ಹಾಗೂ ದೇಶದ ಜನತೆಯ ನಂಬಿಕೆಯನ್ನು ಗಾಳಿಗೆ ತೂರಲಾಗಿದೆ ಎನ್ನುವ ವಿರೋಧ ಪಕ್ಷಗಳ ಟೀಕೆಗಳನ್ನು ತರಾಟೆಗೆ ತೆಗೆದುಕೊಂಡ ಸೋನಿಯಾ, ವಿರೋಧ ಪಕ್ಷಗಳು ನಿಲುವು ಸಮರ್ಥನಿಯವಲ್ಲ ಎಂದು ಕಿಡಿಕಾರಿದರು.