ಕಳೆದ ವರ್ಷದಿಂದ ಅಹಾರ ದರಗಳ ನಿರಂತರ ಏರಿಕೆಯಿಂದಾಗಿ ಸರಕಾರ ಕಳವಳಗೊಂಡಿದ್ದು, ದರಗಳ ನಿಯಂತ್ರಣಕ್ಕಾಗಿ ಸೂಕ್ತ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ಪ್ರಧಾನಮಂತ್ರಿ ಮನಮೋಹನ್ ಸಿಂಗ್ ಹೇಳಿದ್ದಾರೆ.
ಲೋಕಸಭೆಯ ಭಾಷಣ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದ ಪ್ರಧಾನಿ, ಜಾಗತಿಕ ಆರ್ಥಿಕ ಕುಸಿತದ ಪ್ರಭಾವ ಹಾಗೂ ಬರಗಾಲದ ವೈಫಲ್ಯತೆಯಿಂದ ಹೊರಬಂದು, ಕೇಂದ್ರ ಸರಕಾರ ಎರಡಂಕಿಯ ಅಭಿವೃದ್ಧಿಯ ಗುರಿಯನ್ನಿರಿಸಿಕೊಂಡಿದೆ ಎಂದು ತಿಳಿಸಿದ್ದಾರೆ.
ದೇಶದ ಆರ್ಥಿಕತೆ ಪ್ರಸಕ್ತ ಆರ್ಥಿಕ ವರ್ಷಾಂತ್ಯಕ್ಕೆ ಶೇ.7.2ರಿಂದ ಶೇ.7.5 ರಷ್ಟಾಗುವ ನಿರೀಕ್ಷೆಯಿದೆ. ಮುಂಬರುವ ಆರ್ಥಿಕ ವರ್ಷದ ಮುಕ್ತಾಯಕ್ಕೆ ಜಿಡಿಪಿ ದರ ಶೇ.8ಕ್ಕೆ ತಲುಪಲಿದೆ. ನಂತರದ ವರ್ಷದಲ್ಲಿ ಜಿಡಿಪಿ ದರ ಶೇ.9ಕ್ಕೆ ಮರಳಲಿದೆ ಎಂದು ಪ್ರಧಾನಿ ಮನಮೋಹನ್ ಸಿಂಗ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ದೇಶದ ಆರ್ಥಿಕತೆ ಸದೃಢವಾಗಿದೆ ಎನ್ನುವುದು ನನ್ನ ವಿಶ್ವಾಸವಾಗಿದೆ. ಒಂದು ವೇಳೆ ಆರ್ಥಿಕತೆಯನ್ನು ಸದುಪಯೋಗಪಡಿಸಿಕೊಂಡಲ್ಲಿ ಅಥವಾ ಒಂದು ವೇಳೆ ಸಾಮಾಜಿಕ ಮೂಲಸೌಕರ್ಯಗಳನ್ನು ಹೆಚ್ಚಿಸಿದಲ್ಲಿ, ದೇಶದ ಜಿಡಿಪಿ ದರ ಎರಡಂಕಿಗೆ ತಲುಪುವ ಸಾಧ್ಯತೆಗಳಿವೆ ಎಂದು ಪ್ರಧಾನಿ ತಿಳಿಸಿದ್ದಾರೆ.