ಕಳೆದ 20 ತಿಂಗಳುಗಳಿಂದ ವಿವಾದಗಳ ಸುಳಿಗೆ ಸಿಲುಕಿ ನೆನೆಗುದಿಯಲ್ಲಿದ್ದ 35 ಸಾವಿರ ಕೋಟಿ ರೂಪಾಯಿಗಳ ಟೆಂಡರ್ನ್ನು, ಬಿಎಸ್ಎನ್ಎಲ್ ರದ್ದುಗೊಳಿಸಿ ಆದೇಶ ಹೊರಡಿಸಿದೆ.
ಮೊಬೈಲ್ ಸೇವೆ ವಿಸ್ತರಣೆಗಾಗಿ ಉಪಕರಣಗಳ ಖರೀದಿಗೆ ಸರಕಾರಿ ಸ್ವಾಮ್ಯದ ಭಾರತ ಸಂಚಾರ ನಿಗಮ ಲಿಮಿಟೆಡ್ 35 ಸಾವಿರ ಕೋಟಿ ರೂಪಾಯಿಗಳ ಟೆಂಡರ್ ಕರೆದಿತ್ತು. ಆದರೆ ಟೆಂಡರ್ನಲ್ಲಿ ಅವ್ಯವಹಾರ ನಡೆದಿದೆ ಎನ್ನುವ ಆರೋಪಗಳ ಹಿನ್ನೆಲೆಯಲ್ಲಿ ವಿವಾದ ಸೃಷ್ಟಿಸಿತ್ತು.
ಸ್ಯಾಮ್ ಪಿತ್ರೋಡಾ ಸಮಿತಿ 35ಸಾವಿರ ಕೋಟಿ ರೂಪಾಯಿ ವೆಚ್ಚದ 93 ಮಿಲಿಯನ್ ಜಿಎಸ್ಎಂ ಟೆಂಡರ್ನಿಂದ ದೂರವಿರುವಂತೆ ಶಿಫಾರಸ್ಸು ಮಾಡಿತ್ತು.ಸಮಿತಿ ನಿಲುವಿಗೆ ಬದ್ಧವಾಗಿ ಟೆಂಡರ್ ರದ್ದುಗೊಳಿಸಲಾಗಿದೆ ಎಂದು ಬಿಎಸ್ಎನ್ಎಲ್ ಅಧಿಕಾರಿಗಳು ತಿಳಿಸಿದ್ದಾರೆ.
ಬಿಎಸ್ಎನ್ಎಲ್ ಹಿರಿಯ ಅಧಿಕಾರಿಗಳ ಪ್ರಕಾರ,ಪಿತ್ರೋಡಾ ಸಮಿತಿಯ ಶಿಫಾರಸ್ಸಿನಂತೆ ಅಡಳಿತ ಮಂಡಳಿಯ ನಿರ್ಧಾರವನ್ನು ಕೇಂದ್ರಸರಕಾರಕ್ಕೆ ಕಳುಹಿಸಲಾಗಿದೆ.ಅಂತಿಮ ತೀರ್ಮಾನ ಸರಕಾರ ತೆಗೆದುಕೊಳ್ಳಲಿದೆ ಎಂದು ತಿಳಿಸಿದ್ದಾರೆ.
ದೇಶದ ಉತ್ತರ ಮತ್ತು ಪೂರ್ವಿಯ ವಲಯಗಳಿಗಾಗಿ ಸ್ವೀಡಿಷ್ ಉಪಕರಣ ತಯಾರಿಕೆ ಸಂಸ್ಥೆ ಎರಿಕ್ಸನ್ ಅತಿ ಕಡಿಮೆ ಬಿಡ್ ಸಲ್ಲಿಸಿ ಮುಂಚೂಣಿ ಸ್ಥಾನದಲ್ಲಿತ್ತು.ದಕ್ಷಿಣವಲಯದಲ್ಲಿ ಚೀನಾದ ಕಂಪೆನಿ ಹುವಾವೈ ಅತಿ ಕಡಿಮೆ ದರವನ್ನು ನಮೂದಿಸಿತ್ತು.
ನೋಕಿಯಾ ಸಿಮನ್ಸ್ ನೆಟ್ವರ್ಕ್ ಕಂಪೆನಿಯನ್ನು ಟೆಂಡರ್ನಿಂದ ಅನರ್ಹತೆಗೊಳಿಸಿದ ಹಿನ್ನೆಲೆಯಲ್ಲಿ, ಕಂಪೆನಿ ಬಿಎಸ್ಎನ್ಎಲ್ ವಿರುದ್ಧ ನ್ಯಾಯಾಲದ ಮೊರೆಹೋದ ನಂತರ ವಿವಾದ ಸೃಷ್ಟಿಯಾಗಿತ್ತು.