ತೆರಿಗೆ ಸಂಗ್ರಹ ಮತ್ತಷ್ಟು ದಯಾಮಯವಾಗಿರಬೇಕು.ತೆರಿಗೆ ಪಾವತಿದಾರರು ದೇಶದ ನಿರ್ಮಾಣದಲ್ಲಿ ಪ್ರಮುಖ ಪಾಲುದಾರರು ಎಂದು ಕಂದಾಯ ಅಧಿಕಾರಿಗಳು ಅರಿತುಕೊಂಡಲ್ಲಿ ಉತ್ತಮವಾಗಿರುತ್ತದೆ ಎಂದು ಕೇಂದ್ರ ವಿತ್ತಖಾತೆ ಸಚಿವ ಪ್ರಣಬ್ ಮುಖರ್ಜಿ ಕರೆ ನೀಡಿದ್ದಾರೆ.
ಮಾನವೀಯತೆಯಿಂದ ತೆರಿಗೆ ಸಂಗ್ರಹಿಸುವುದನ್ನು ನಾವುಗಳು ಕಲಿಯಬೇಕಾಗಿದೆ. ಕೇಂದ್ರ ಸರಕಾರ ಕೆಲ ನೀತಿಗಳಲ್ಲಿ ಬದಲಾವಣೆಗಳು ತಂದಿರುವುದರಿಂದ ಕಳೆದ ಒಂದು ದಶಕದಲ್ಲಿ ತೆರಿಗೆ ಸಂಗ್ರಹದಲ್ಲಿ ಹೆಚ್ಚಳವಾಗಿದೆ ಎಂದು ಭಾರತ ಕಂದಾಯ ಅಧಿಕಾರಿಗಳ 63ನೇ ತರಬೇತಿ ಶಿಬಿರದಲ್ಲಿ ಸಚಿವ ಮುಖರ್ಜಿ ತಿಳಿಸಿದ್ದಾರೆ.
ನಮ್ಮ ನಿಲುವುಗಳಲ್ಲಿ ಕೆಲ ಬದಲಾವಣೆಗಳು ತಂದಲ್ಲಿ ಕಳೆದ ದಶಕಗಳಿಗಿಂತ 10 ಪಟ್ಟು ಹೆಚ್ಚು ತೆರಿಗೆಯನ್ನು ಸಂಗ್ರಹಿಸಬಹುದಾಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ಕಂದಾಯ ಇಲಾಖೆಯ ಪ್ರಯತ್ನಗಳಿಂದ ತೆರಿಗೆ ಸಂಗ್ರಹದಲ್ಲಿ ಹೆಚ್ಚಳವಾಗಿದ್ದು, ನೇರ ತೆರಿಗೆ ಸಂಗ್ರಹ ಶೇ.55ಕ್ಕಿಂತ ಏರಿಕೆ ಕಂಡಿದೆ. ಇದರಿಂದಾಗಿ 71 ಸಾವಿರ ಕೋಟಿ ರೂಪಾಯಿ ರೈತರ ಸಾಲವನ್ನು ಮನ್ನಾ ಮಾಡಲಾಗಿದೆ ಎಂದು ವಿತ್ತಸಚಿವ ಪ್ರಣಬ್ ಮುಖರ್ಜಿ ತಿಳಿಸಿದ್ದಾರೆ.