ಅಹಾರ ಮತ್ತು ಅಗತ್ಯ ವಸ್ತುಗಳ ಪ್ರಾಥಮಿಕ ದರಗಳ ಹಣದುಬ್ಬರ ದರ ಮಾರ್ಚ್ ಅಂತ್ಯಕ್ಕೆ ಇಳಿಕೆಯಾಗುವ ಸಾಧ್ಯತೆಗಳಿವೆ ಎಂದು ಪ್ರಧಾನಮಂತ್ರಿಗಳ ಆರ್ಥಿಕ ಸಲಹಾ ಸಮಿತಿಯ ಮುಖ್ಯಸ್ಥ ಸಿ.ರಂಗರಾಜನ್ ಹೇಳಿದ್ದಾರೆ.
ಸರಕಾರದ ಗೋದಾಮುಗಳಲ್ಲಿ ಅಹಾರ ಸಂಗ್ರಹಣೆ ಹೇರಳವಾಗಿದ್ದು, ಅಹಾರ ಧಾನ್ಯಗಳ ಸೂಕ್ತ ಸರಬರಾಜು ಕೊರತೆಯಿಂದಾಗಿ ದರಗಳಲ್ಲಿ ಏರಿಕೆಯಾಗಿದೆ ಎಂದು ಆರ್ಬಿಐ ಮಾಜಿ ಗವರ್ನರ್ ರಂಗರಾಜನ್ ತಿಳಿಸಿದ್ದಾರೆ.
ಪ್ರಸಕ್ತ ಸಮಯದಲ್ಲಿ ರಬಿ ಬೆಳೆ ಉತ್ತಮವಾಗಿದೆ ಎಂದು ಸಂಕೇತಗಳು ಕಂಡುಬರುತ್ತಿದ್ದು,ಸಾರ್ವಜನಿಕ ಸರಬರಾಜು ವ್ಯವಸ್ಥೆಯ ಮೂಲಕ ಹೆಚ್ಚಿನ ಅಹಾರ ಧಾನ್ಯಗಳನ್ನು ಸರಬರಾಜು ಮಾಡಿದಲ್ಲಿ ಅಹಾರ ದರಗಳಲ್ಲಿ ಇಳಿಕೆಯಾಗಲಿದೆ ಎಂದರು.
ಕೃಷಿ ವಸ್ತುಗಳ ಫ್ಯೂಚರ್ ಟ್ರೇಡಿಂಗ್ನಿಂದಾಗಿ, ದರಗಳಲ್ಲಿ ಏರಿಕೆಯಾಗಲಿದೆ ಎನ್ನುವ ಬಗ್ಗೆ ನಿಖರವಾದ ಆಧಾರಗಳಿಲ್ಲ ಎಂದು ರಂಗರಾಜನ್ ತಿಳಿಸಿದ್ದಾರೆ.
ಆರ್ಥಿಕ ವೃದ್ಧಿ ದರ ಮುಂದಿನ ಆರ್ಥಿಕ ಸಾಲಿನಲ್ಲಿ ಶೇ.8 ರಿಂದ ಶೇ.9ಕ್ಕೆ ತಲುಪುವ ನಿರೀಕ್ಷೆಯಿದೆ ಎಂದು ಪ್ರಧಾನಮಂತ್ರಿಗಳ ಆರ್ಥಿಕ ಸಲಹಾ ಸಮಿತಿಯ ಮುಖ್ಯಸ್ಥ ಸಿ.ರಂಗರಾಜನ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.