ಸಗಟು ಸೂಚ್ಯಂಕ ಹಣದುಬ್ಬರ ದರ ಫೆಬ್ರವರಿ ತಿಂಗಳಲ್ಲಿ ಎರಡಂಕಿಗೆ ತಲುಪಿದ ಮಧ್ಯೆಯು ಅಹಾರ ದರಗಳ ಏರಿಕೆಯ ಒತ್ತಡ ನಿರಂತರವಾಗಿ ಕರಗುತ್ತಿದೆ ಎಂದು ವಿತ್ತಸಚಿವ ಪ್ರಣಬ್ ಮುಖರ್ಜಿ ಹೇಳಿದ್ದಾರೆ.
ಮುಂಬರುವ ಕೆಲ ವಾರಗಳವರೆಗೆ ಅಹಾರ ಹಣದುಬ್ಬರ ಒತ್ತಡವನ್ನು ಎದುರಿಸುವ ಆತಂಕ ಕಾಡುತ್ತಿದೆ. ಅಹಾರ ಹಣದುಬ್ಬರ ಇದೀಗ ನಿಧಾನವಾಗಿ ಇಳಿಕೆಯಾಗುತ್ತಿದೆ. ಕೇಂದ್ರ ಸರಕಾರ ಅಹಾರ ದರಗಳ ನಿಯಂತ್ರಣಕ್ಕಾಗಿ ಸೂಕ್ತ ಕ್ರಮಗಳನ್ನು ತೆಗೆದುಕೊಂಡಿದೆ ಎಂದು ಮುಖರ್ಜಿ ತಿಳಿಸಿದ್ದಾರೆ.
ಇಂಧನ ದರ ಹೆಚ್ಚಳ ಹಾಗೂ ಅಗತ್ಯ ವಸ್ತುಗಳ ದರ ಏರಿಕೆಯಿಂದಾಗಿ, ಜನೆವರಿ ತಿಂಗಳಲ್ಲಿ ಶೇ.8.56ರಷ್ಟಿದ್ದ ಸಗಟು ಸೂಚ್ಯಂಕ ಅಹಾರ ಹಣದುಬ್ಬರ ದರ, ಫೆಬ್ರವರಿ ತಿಂಗಳ ಅವಧಿಯಲ್ಲಿ ಶೇ.9.89ರಷ್ಟು ಏರಿಕೆ ಕಂಡಿದೆ.
ಫೆಬ್ರವರಿ ತಿಂಗಳ ಅವಧಿಯಲ್ಲಿ ಸಕ್ಕರೆ ದರ ಶೇ.55.47ರಷ್ಟು ಹಾಗೂ ಆಲೂಗಡ್ಡೆ ದರ ಶೇ.30ರಷ್ಟು ಮತ್ತು ದ್ವಿದಳ ಧಾನ್ಯ ದರಗಳು ಶೇ.35.58ರಷ್ಟು ಏರಿಕೆ ಕಂಡಿದೆ.