ಸರಕಾರಿ ಸ್ವಾಮ್ಯದ ತೈಲ ಕಂಪೆನಿಗಳು, ಸರಕಾರ ನಿಗದಿಪಡಿಸಿದ ದರದಲ್ಲಿ ತೈಲ ಮಾರಾಟದಿಂದಾಗಿ, ಮುಂದಿನ ಆರ್ಥಿಕ ವರ್ಷದಲ್ಲಿ ಶೇ.55ರಷ್ಟು(700 ಬಿಲಿಯನ್ ರೂಪಾಯಿಗಳು)ನಷ್ಟವನ್ನು ಎದುರಿಸುವ ಸಾಧ್ಯತೆಗಳಿವೆ ಎಂದು ಪೆಟ್ರೋಲಿಯಂ ಸಚಿವಾಲಯದ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.
ಪೆಟ್ರೋಲಿಯಂ ಉತ್ಪನ್ನಗಳ ದರಗಳನ್ನು ವಿವೇಕಯುಕ್ತವಾಗಿ ನಿಗದಿಪಡಿಸುವುದು ಅಗತ್ಯವಾಗಿದೆ ಎಂದು ಪರಿಸರ ಸ್ನೇಹಿ ಯುರೋ-4 ಇಂಧನ ಉತ್ಪನ್ನವನ್ನು ಬಿಡುಗಡೆಗೊಳಿಸಿ ಮಾತನಾಡಿದ ಪೆಟ್ರೋಲಿಯಂ ಕಾರ್ಯದರ್ಶಿ ಎಸ್.ಸುಂದರೇಶನ್, ವಿವೇಕಯುಕ್ತವಾಗಿ ದರ ನಿಗದಿಪಡಿಸದಿದ್ದಲ್ಲಿ ತೈಲ ಕಂಪೆನಿಗಳು ಮುಚ್ಚಿಹೋಗಲಿವೆ ಎಂದು ಎಚ್ಚರಿಸಿದರು.
ಕೇಂದ್ರ ಸರಕಾರ ಹಣದುಬ್ಬರ ನಿಯಂತ್ರಣಕ್ಕಾಗಿ ಅನಿಲ ಪೆಟ್ರೋಲ್ ಸೀಮೆಎಣ್ಣೆ ದರಗಳನ್ನು ಕಡಿಮೆ ನಿಗದಿಪಡಿಸುತ್ತದೆ.ಕಳೆದ ಫೆಬ್ರವರಿ ತಿಂಗಳ ಅವಧಿಯಲ್ಲಿ ಇಂಧನ ದರಗಳ ಏರಿಕೆ ಘೋಷಿಸಿತ್ತು.ಇದೀಗ ಮತ್ತೆ ಪೆಟ್ರೋಲ್ ದರಗಳನ್ನು ಹೆಚ್ಚಿಸಲು ಸರಕಾರಕ್ಕೆ ಸಾಧ್ಯವಾಗದಿರುವುದರಿಂದ ತೈಲ ಕಂಪೆನಿಗಳು ಒತ್ತಡವನ್ನು ಎದುರಿಸಬೇಕಾಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ಭಾರತದ ಇಂಡಿಯನ್ ಆಯಿಲ್ ಕಾರ್ಪೋರೇಶನ್, ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೋರೇಶನ್ ಮತ್ತು ಭಾರತ್ ಪೆಟ್ರೋಲಿಯಂ ಕಾರ್ಪೋರೇಶನ್ ಕಂಪೆನಿಗಳು ಪ್ರಸಕ್ತ ಆರ್ಥಿಕ ವರ್ಷದಲ್ಲಿ 450 ಬಿಲಿಯನ್ ರೂಪಾಯಿಗಳಷ್ಟು ನಷ್ಟವನ್ನು ಎದುರಿಸುತ್ತಿವೆ ಎಂದು ಪೆಟ್ರೋಲಿಯಂ ಕಾರ್ಯದರ್ಶಿ ಎಸ್.ಸುಂದರೇಶನ್ ತಿಳಿಸಿದ್ದಾರೆ.