ಭಾರತೀಯ ರೈಲ್ವೆ ಸೀಜನ್ ಅವಧಿಯಲ್ಲಿ ಕಲ್ಲಿದ್ದಲು ಸೇರಿದಂತೆ ಸರಕು ಸಾಗಾಣೆ ದರದ ಶುಲ್ಕದಲ್ಲಿ ಹೆಚ್ಚಳಗೊಳಿಸಿದ್ದರಿಂದ,ಅಹಾರ ಮತ್ತು ಉತ್ಪಾದ ಕ್ಷೇತ್ರದ ವಸ್ತುಗಳ ದರಗಳಲ್ಲಿ ಏರಿಕೆಯಾಗುವ ಸಾಧ್ಯತೆಗಳಿವೆ ಎಂದು ರೈಲ್ವೆ ಮೂಲಗಳು ತಿಳಿಸಿವೆ.
ಫೆಬ್ರವರಿ ತಿಂಗಳ ಅವಧಿಯಲ್ಲಿ ಅಹಾರ ಸಗಟು ಸೂಚ್ಯಂಕ ದರ ಶೇ.9.9ರಷ್ಟು ಏರಿಕೆ ಕಂಡಿತ್ತು. ಆದರೆ ಕಳೆದ ಕೆಲ ವಾರಗಳಲ್ಲಿ ಬೆಳೆಗಳು ಮಾರುಕಟ್ಟೆಗೆ ಬರುವ ನಿರೀಕ್ಷೆಯಲ್ಲಿ ಅಹಾರ ದರಗಳು ನಿಧಾನವಾಗಿ ಇಳಿಕೆಯತ್ತ ಸಾಗಿದ್ದವು.ಆದರೆ ಸರಕು ಸಾಗಾಣೆ ಶುಲ್ಕದಲ್ಲಿ ಹೆಚ್ಚಳಗೊಳಿಸಿದ್ದರಿಂದ ಮತ್ತೆ ದರಗಳಲ್ಲಿ ಏರಿಕೆಯಾಗುವ ಸಾಧ್ಯತೆಗಳಿವೆ ಎಂದು ಆರ್ಥಿಕ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಕಲ್ಲಿದ್ದಲು ಸಾಗಾಣೆ ದರದಲ್ಲಿ ಶೇ.5ರಷ್ಟು ಹಾಗೂ ಇತರ ಎಲ್ಲಾ ವಸ್ತುಗಳ ಸಾಗಾಣೆ ದರದಲ್ಲಿ ಶೇ.7ರಷ್ಟು ಶುಲ್ಕವನ್ನು ಹೆಚ್ಚಳಗೊಳಿಸಲು ನಿರ್ಧರಿಸಿದ್ದು, ಪ್ರಮುಖ ಸೀಜನ್ಗಳಾದ ಏಪ್ರಿಲ್ 1ರಿಂದ ಜೂನ್ 30 ಹಾಗೂ ಅಕ್ಟೋಬರ್ 1ರಿಂದ ಮಾರ್ಚ್ ತಿಂಗಳುಗಳಲ್ಲಿ ಶುಲ್ಕ ಹೆಚ್ಚಳ ಮಾಡಲಾಗಿದೆ ಎಂದು ರೈಲ್ವೆ ಸಚಿವಾಲಯದ ಮೂಲಗಳು ತಿಳಿಸಿವೆ.
ರೈಲ್ವೆ ಸಾಗಾಣೆ ಶುಲ್ಕ ಹೆಚ್ಚಳದಿಂದ ಹಣದುಬ್ಬರ ಹೆಚ್ಚಳವಾಗಲಿದೆ. ದರ ಏರಿಕೆಯಿಂದ ಮುಕ್ತಿ ದೊರೆಯುವಂತೆ ಕಾಣುತ್ತಿಲ್ಲ ಎಂದು ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಪಬ್ಲಿಕ್ ಫೈನಾನ್ಸ್ ಆಂಡ್ ಪಾಲಿಸಿ ಕಾಲೇಜಿನ, ಪ್ರೋಫೆಸರ್ ಎನ್.ಭಾನುಮೂರ್ತಿ ಅಭಿಪ್ರಾಯಪಟ್ಟಿದ್ದಾರೆ.