ಹಣದುಬ್ಬರ ಏರಿಕೆಗೆ ಸರಬರಾಜು ಕೊರತೆ ಕಾರಣವೆಂದು ಆರೋಪಿಸಿದ ವಿತ್ತಸಚಿವ ಪ್ರಣಬ್ ಮುಖರ್ಜಿ,ರಬಿ ಬೆಳೆಯ ಬಿತ್ತನೆಯ ನಂತರ ಅಹಾರ ದರಗಳಲ್ಲಿ ಇಳಿಕೆಯಾಗುವ ನಿರೀಕ್ಷೆಯಿದೆ ಎಂದು ಹೇಳಿದ್ದಾರೆ.
ಅಗತ್ಯ ವಸ್ತುಗಳ ಕೊರತೆ ಹಾಗೂ ಸೂಕ್ತ ಸರಬರಾಜು ಬಿಕ್ಕಟ್ಟಿನ ಹಿನ್ನೆಲೆಯಲ್ಲಿ, ಹಣದುಬ್ಬರ ಹೆಚ್ಚಳಕ್ಕೆ ಕಾರಣವಾಗಿದೆ ಎಂದು ಸಚಿವ ಮುಖರ್ಜಿ ಸುದ್ದಿಗಾರರಿಗೆ ತಿಳಿಸಿದ್ದಾರೆ.
ನಾವು ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳುತ್ತಿದ್ದೇವೆ. ರಬಿ ಬೆಳೆಯ ಬಿತ್ತನೆಯ ನಂತರ ಅಹಾರ ವಸ್ತುಗಳ ದರಗಳಲ್ಲಿ ಇಳಿಕೆಯಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ದೇಶಕ್ಕೆ 18 ಮಿಲಿಯನ್ ಟನ್ಗಳ ದ್ವಿದಳಧಾನ್ಯದ ಅಗತ್ಯತೆಯಿದೆ. ಆದರೆ ಕೇವಲ 14 ಮಿಲಿಯನ್ ಟನ್ ಮಾತ್ರ ಉತ್ಪಾದಿಸಲಾಗುತ್ತಿದೆ. ಆದ್ದರಿಂದ ವಾರ್ಷಿಕವಾಗಿ 4 ಮಿಲಿಯನ್ ಟನ್ ದ್ವಿದಳ ಧಾನ್ಯದ ಕೊರತೆಯಾಗುತ್ತಿದೆ ಎಂದರು.
ವಿಶ್ವದ ಕೆಲ ರಾಷ್ಟ್ರಗಳು ಮಾತ್ರ ದ್ವಿದಳ ಧಾನ್ಯಗಳನ್ನು ಬೆಳೆಯುತ್ತಿದ್ದು, ಅಂತಾರಾಷ್ಟ್ರೀಯ ಮಟ್ಟದಲ್ಲಿ ದರಗಳಲ್ಲಿ ಕೂಡಾ ಭಾರಿ ಹೆಚ್ಚಳವಿದೆ.ಅದರಂತೆ ಸಕ್ಕರೆ ಉತ್ಪಾದನೆಯಲ್ಲಿ ಕೂಡಾ 90 ಲಕ್ಷ ಟನ್ ಕೊರತೆ ಎದುರಿಸಬೇಕಾಗಿದೆ.ಈಗಾಗಲೇ 20 ಲಕ್ಷ ಟನ್ ಖಾದ್ಯ ತೈಲವನ್ನು ಅಮುದು ಮಾಡಿಕೊಳ್ಳಲಾಗಿದೆ ಎಂದು ಸಚಿವ ಪ್ರಣಬ್ ಮುಖರ್ಜಿ ತಿಳಿಸಿದ್ದಾರೆ.