ಹೂಡಿಕೆದಾರರನ್ನು ಸೆಳೆಯಲು ವಾಣಿಜ್ಯ ನಗರಿ ಮುಂಬಯಿಯಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ರೋಡ್ ಷೋ ನಡೆಸಿದ್ದಾಯಿತು. ಇದೀಗ ಜವಳಿ, ಯುವಜನ ಸೇವೆ ಹಾಗೂ ಕ್ರೀಡಾ ಸಚಿವ ಗೂಳಿಹಟ್ಟಿ ಶೇಖರ್ ಅವರ ಸರದಿ.
ಜವಳಿ ಕ್ಷೇತ್ರಕ್ಕೆ ಉದ್ಯಮಿಗಳನ್ನು ಆಹ್ವಾನಿಸಲು ದೇಶದ ನಾಲ್ಕು ನಗರಗಳಲ್ಲಿ ರೋಡ್ ಷೋ ನಡೆಸಲು ಸಚಿವರು ನಿರ್ಧರಿಸಿದ್ದಾರೆ. ಏ. 19ರಂದು ಮುಂಬಯಿ, 20ರಂದು ಅಹಮದಾಬಾದ್, 21ರಂದು ಸೂರತ್, 30ರಂದು ಚೆನ್ನೈನಲ್ಲಿ ರೋಡ್ ಷೋ ನಡೆಯಲಿದೆ.
ಜೊತೆಗೆ ಮೇ ತಿಂಗಳ 16ರಿಂದ ಇಂಡೋನೇಷ್ಯಾ, ಶ್ರೀಲಂಕಾ ಹಾಗೂ ಕೊರಿಯಾ ದೇಶಗಳಿಗೆ ಇಲಾಖೆ ಅಧಿಕಾರಿಗಳ ನಿಯೋಗ ಭೇಟಿ ನೀಡಿ ಉದ್ಯಮಿಗಳ ಜತೆ ಮಾತುಕತೆ ನಡೆಸಿ ಬಂಡವಾಳ ಹೂಡಿಕೆಗೆ ಆಹ್ವಾನ ನೀಡಲಿದೆ ಎಂದು ಸಚಿವ ಶೇಖರ್ ತಿಳಿಸಿದ್ದಾರೆ.
ಜವಳಿ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಬಂಡವಾಳ ಹೂಡಿಕೆದಾರರ ಜಾಗತಿಕ ಸಮಾವೇಶ ಜೂನ್ನಲ್ಲಿ ನಡೆಯಲಿದೆ. ರಾಜ್ಯದಲ್ಲಿ ಸಿದ್ಧ ಉಡುಪು ತಯಾರಿಕೆ ಘಟಕಗಳನ್ನು ಸ್ಥಾಪಿಸಲು ಈಗಾಗಲೇ ಹಲವಾರು ಕಂಪನಿಗಳು ಆಸಕ್ತಿ ತೋರಿಸಿವೆ. ಮಹಾರಾಷ್ಟ್ತ್ರ ಮೂಲದ ಇಟ್ಕೋ ಕಂಪನಿ 460 ಕೋಟಿ ರೂ. ವೆಚ್ಚದಲ್ಲಿ ನಿಪ್ಪಾಣಿ ಹಾಗೂ ಚಿತ್ರದುರ್ಗದಲ್ಲಿ ಕಾರ್ಖಾನೆ ಸ್ಥಾಪಿಸಲು ಮುಂದಾಗಿದೆ. ಮುಂಬಯಿನ ರಾಯನ್ ಕಂಪನಿ ಶಿಗ್ಗಾಂವ್, ಮಳವಳ್ಳಿ, ಹೊಸದುರ್ಗ ಸೇರಿದಂತೆ ಆರು ತಾಲೂಕು ಕೇಂದ್ರಗಳಲ್ಲಿ ಜಾಗ ಕೇಳಿದೆ. ತಲಾ 150 ಕೋಟಿ ರೂ. ವೆಚ್ಚದಲ್ಲಿ ಕಾರ್ಖಾನೆ ಆರಂಭಿಸುವುದಾಗಿ ಕಂಪನಿ ತಿಳಿಸಿದೆ. ಜತೆಗೆ ತಲಾ 10 ಎಕರೆ ಜಾಗಕ್ಕೆ ಬೇಡಿಕೆ ಇಟ್ಟಿದೆ. ಇದಕ್ಕೆ ಸರಕಾರ ಒಪ್ಪಿಗೆ ಸೂಚಿಸಿದೆ ಎಂದು ವಿವರಿಸಿದರು.
ಮುಂಬಯಿಯ ಶಾಹಿ ಕಂಪನಿ ಸಹ ಮದ್ದೂರು ಬಳಿ 260 ಕೋಟಿ ರೂ. ವೆಚ್ಚದಲ್ಲಿ ಕಾರ್ಖಾನೆ ಸ್ಥಾಪಿಸಲಿದ್ದು ಪ್ರಸ್ತಾವನೆ ಸಲ್ಲಿಸಿದೆ. ಚೆನ್ನೈ ಮೂಲದ ಮತ್ತೊಂದು ಕಂಪನಿ ಬೆಂಗಳೂರು ಮಹಾನಗರದ ಸುತ್ತಮುತ್ತ 300 ಕೋಟಿ ರೂ. ವೆಚ್ಚದಲ್ಲಿ ಸಿದ್ಧ ಉಡುಪು ತಯಾರಿಕೆ ಗ್ರಾಮ ನಿರ್ಮಿಸಲು ಉದ್ದೇಶಿಸಿದೆ ಎಂದು ಅವರು ಹೇಳಿದರು.