ಪ್ರತಿ ಕೆಜಿಗೆ 50 ರೂಪಾಯಿಗಳವರೆಗೆ ಏರಿದ್ದ ಸಕ್ಕರೆ ಬೆಲೆ ಈಗ ಪ್ರಮುಖ ನಗರಗಳಾದ ಕೋಲ್ಕತ್ತಾ, ಮುಂಬೈ ಹಾಗೂ ದೆಹಲಿಗಳಲ್ಲಿ ಇಳಿಕೆಯಾಗಿದೆ ಎಂದು ಕೇಂದ್ರ ಸರ್ಕಾರ ಹೇಳಿದೆ.
ಗ್ರಾಹಕ ವ್ಯವಹಾರಗಳ ಸಚಿವಾಲಯ ನೀಡಿದ ವರದಿಯ ಪ್ರಕಾರ, ದೆಹಲಿ, ಶಿಮ್ಲಾ, ಮುಂಬೈ, ಜೈಪುರ, ಕೋಲ್ಕತ್ತಾ ಹಾಗೂ ತಿರುವನಂತಪುರ ನಗರಗಳಲ್ಲಿ ಸಕ್ಕರೆ ಬೆಲೆ ಈಗ ಇಳಿಕೆಯಾಗಿದೆ.
ಕಳೆದೆರಡು ತಿಂಗಳಲ್ಲಿ ಸಕ್ಕರೆ ಬೆಲೆ ಇಳಿಮುಖವಾಗಿ ಸಾಗುತ್ತಿದೆ. ಮಹಾರಾಷ್ಟ್ರ ಹಾಗೂ ಉತ್ತರ ಪ್ರದೇಶಗಳಿಂದ ಸಕ್ಕರೆ ಉತ್ಪಾದನೆ ಉತ್ತಮವಾಗಿರುವುದರಿಂದ ಬೇಡಿಕೆಗೂ ಹೆಚ್ಚು ಸಕ್ಕರೆ ಲಭ್ಯವಾಗುತ್ತಿದೆ. ಹೀಗಾಗಿ ಮಹಾನಗರಗಳಲ್ಲಿ ಸಕ್ಕರೆ ಬೆಲೆ ಇಳಿಕೆಯಾಗಲು ಕಾರಣ ಎಂದು ಸರ್ಕಾರ ಹೇಳಿದೆ.
ಸದ್ಯ ಸಕ್ಕರೆ ಬೆಲೆ ಮಹಾನಗರಗಳಲ್ಲಿ ಪ್ರತಿ ಕೆಜಿಗೆ 34ರಿಂದ 36 ರೂಪಾಯಿಗಳಲ್ಲಿ ಲಭ್ಯವಿದೆ.
ಇದೇ ಸಂದರ್ಭ ದೆಹಲಿ, ಬೆಂಗಳೂರು, ಲಕ್ನೋ ಮತ್ತಿತರ ನಗರಗಳಲ್ಲಿ ಗೋಧಿಯ ಬೆಲೆಯೂ ಇಳಿಕೆಯಾಗಿದೆ. ಆಲೂಗಡ್ಡೆ, ಈರುಳ್ಳಿ ಹಾಗೂ ಆಹಾರ ತೈಲಗಳ ಬೆಲೆ ಮಾತ್ರ ಇನ್ನೂ ಕಡಿಮೆಯಾಗಿಲ್ಲ.