ಜಾಗತಿಕ ಆರ್ಥಿಕ ಕುಸಿತದಿಂದ ಕಂಗಾಲಾಗಿದ್ದ ವೈಮಾನಿಕ ಕ್ಷೇತ್ರದ ಉದ್ಯಮ,ಪ್ರಸಕ್ತ ಸಮಯದಲ್ಲಿ ಚೇತರಿಕೆ ಕಾಣುತ್ತಿದ್ದು, ಪ್ರಯಾಣಿಕರ ಸಂಖ್ಯೆಯಲ್ಲಿ ಶೇ.20ರಷ್ಟು ಹೆಚ್ಚಳವಾಗಿದೆ ಎಂದು ಕಿಂಗ್ಫಿಶರ್ ಏರ್ಲೈನ್ಸ್ ಮುಖ್ಯಸ್ಥ ವಿಜಯ್ ಮಲ್ಯ ಹೇಳಿದ್ದಾರೆ.
ಏರೋನಾಟಿಕಲ್ ಸೂಸೈಟಿ ಆಫ್ ಇಂಡಿಯಾ ಆಯೋಜಿಸಿದ ಫ್ರೆಂಟೈಯರ್ಸ್ ಆಪ್ ಏರೋನಾಟಿಕಲ್ ಟೆಕ್ನಾಲಾಜೀಸ್ ಎರಡು ದಿನಗಳ ಅವಧಿಯ ಸಮಾರಂಭವನ್ನು ಉದ್ಘಾಟಿಸಿದ ವಿಜಯ್ ಮಲ್ಯ, ವೈಮಾನಿಕ ಕ್ಷೇತ್ರ ಚೇತರಿಕೆ ಕಾಣುತ್ತಿದೆ ಎಂದು ತಿಳಿಸಿದ್ದಾರೆ.
ವೈಮಾನಿಕ ಕ್ಷೇತ್ರದ ಸಂಶೋಧನೆಗಳನ್ನು ಒಂದೇ ವೇದಿಕೆಯಡಿ ತರುವುದು ಅಗತ್ಯವಾಗಿದ್ದು, ಈ ನಿಟ್ಟಿನಲ್ಲಿ ನ್ಯಾಷನಲ್ ಏರೋನಾಟಿಕ್ಸ್ ಕಮಿಶನ್ ಆಸಕ್ತಿವಹಿಸಬೇಕು. ಈಗಾಗಲೇ ಕೇಂದ್ರ ಸರಕಾರಕ್ಕೆ ಮನವಿಯನ್ನು ಸಲ್ಲಿಸಲಾಗಿದೆ. ಆದರೆ ಇಲ್ಲಿಯವರೆಗೆ ಜಾರಿಗೆ ಬಂದಿಲ್ಲ ಎಂದು ಮಲ್ಯ ವಿಷಾದಿಸಿದರು.
ನಾಗರಿಕ ವಿಮಾನಯಾನ ಮೂಲಸೌಕರ್ಯಗಳ ಅಭಿವೃದ್ಧಿಗೆ ಮಾತ್ರ ಕೇಂದ್ರ ಸರಕಾರ ಹಾಗೂ ಖಾಸಗಿ ಕ್ಷೇತ್ರದ ವೈಮಾನಿಕ ಸಂಸ್ಥೆಗಳು ಕೈ ಜೋಡಿಸಬೇಕಾಗಿಲ್ಲ. ಬಿಕ್ಕಟ್ಟಿನ ಸಮಸ್ಯೆಗಳಾದ ತೆರಿಗೆ ಹೆಚ್ಚಳ, ಉತ್ಪಾದನಾ ವೆಚ್ಚ, ಕಠಿಣ ನಿಯಮಗಳ ಕುರಿತಂತೆ ಚರ್ಚಿಸಿ ಪರಿಹಾರ ಕಂಡುಕೊಳ್ಳುವುದು ಅಗತ್ಯವಾಗಿದೆ ಎಂದು ಮಲ್ಯ ಅಭಿಪ್ರಾಯಪಟ್ಟಿದ್ದಾರೆ.