ಕಳಂಕಿತ ಸತ್ಯಂ ಇನ್ನೆರಡು ವರ್ಷಗಳಲ್ಲಿ ಪರಿಪೂರ್ಣ: ಮಹೀಂದ್ರಾ
ಹೈದರಾಬಾದ್, ಬುಧವಾರ, 14 ಏಪ್ರಿಲ್ 2010( 16:45 IST )
ಮಹೀಂದ್ರಾ ಖರೀದಿಸಿರುವ ಕಳಂಕಿತ ಸತ್ಯಂ ಇದೀಗ ಸುಧಾರಿಕೆಯ ಹಾದಿಯಲ್ಲಿದ್ದು, ಪೂರ್ಣವಾಗಿ ತನ್ನ ಹಳೆಯ ಪ್ರಸಿದ್ಧಿಗೆ ಮರಳಲು ಇನ್ನೂ ಎರಡು ವರ್ಷಗಳು ಬೇಕಾಗಬಹುದು ಎಂದು ಮಹೀಂದ್ರಾ ಹೇಳಿಕೊಂಡಿದೆ.
ಸತ್ಯಂ ಹಗರಣದ ನಂತರ ಮಹೀಂದ್ರಾ ತೆಕ್ಕೆಗೆ ಸೇರಿ ಒಂದು ವರ್ಷವಾದ ಸಂಭ್ರಮಾಚರಣೆಯಲ್ಲಿ ಭಾಗವಹಿಸಿದ ನಂತರ ಈ ಬಗ್ಗೆ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಮಹೀಂದ್ರಾ ಸಂಸ್ಥೆಯ ಉಪಾಧ್ಯಕ್ಷ ಆನಂದ್ ಮಹೀಂದ್ರಾ, ಸತ್ಯಂ ಖರೀದಿಸಿದ್ದಕ್ಕೆ ನನಗೆ ಯಾವುದೇ ಪಶ್ಚಾತಾಪವಿಲ್ಲ. ಇದೀಗ ಒಂದು ವರ್ಷ ಸಂದಿದೆ. ಕಳಂಕಿತ ಕಂಪನಿಯನ್ನು ಖರೀದಿಸಿ ಅದನ್ನು ಸರಿದಾರಿಗೆ ತರುವುದು ತುಂಬ ಸವಾಲಿನ ಕೆಲಸವಾಗಿದೆ ಎಂದು ಅವರು ತಿಳಿಸಿದರು.
ಮಹೀಂದ್ರಾ ಸತ್ಯಂನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸಿ.ಪಿ.ಗುರ್ನಾನಿ ಮಾತನಾಡಿ, ಸತ್ಯಂ ಸಂಪೂರ್ಣ ತನ್ನ ಕಳಂಕದಿಂದ ಹೊರಬಂದು ಬೇರುಗಳನ್ನು ಭದ್ರಪಡಿಸಲು ಇನ್ನೂ ಎರಡು ವರ್ಷಗಳೇ ಬೇಕಾಗಬಹುದು. ಖಂಡಿತವಾಗಿಯೂ ಇದು ಸಮರ್ಥವಾಗಿ ಸದೃಢ ಕಂಪನಿಯಾಗಿ ಹೊರಬರುತ್ತದೆ. ಈಗ ಆಗಿರುವುದು ಕೇವಲ ಒಂದೇ ವರ್ಷ. ಇ್ನನೆರಡು ವರ್ಷಗಳಲ್ಲಿ ಖಂಡಿತಾ ಲಾಭದೆಡೆಗೆ ಮುಖ ಮಾಡುತ್ತದೆ ಎಂಬ ಆತ್ಮ ವಿಶ್ವಾಸ ನನಗಿದೆ. ಇದಕ್ಕಿಂತ ಹೆಚ್ಚು ಏನೂ ಹೇಳಲಾರೆ ಎಂದರು.