ಭಾರತೀಯ ರಿಸರ್ವ್ ಬ್ಯಾಂಕ್ ಏಪ್ರಿಲ್ 20 ರಂದು ಆರ್ಥಿಕ ಪರಿಷ್ಕರಣ ಸಭೆ ನಡೆಸಲಿರುವ ಹಿನ್ನೆಲೆಯಲ್ಲಿ, ಆರ್ಬಿಐ ಗವರ್ನರ್ ಡಿ.ಸುಬ್ಬಾರಾವ್ ವಿತ್ತ ಸಚಿವ ಪ್ರಣಬ್ ಮುಖರ್ಜಿಯವರನ್ನು ಇಂದು ಸಂಜೆ ಭೇಟಿ ಮಾಡಲಿದ್ದಾರೆ ಎಂದು ವಿತ್ತಸಚಿವಾಲಯದ ಮೂಲಗಳು ತಿಳಿಸಿವೆ.
ಆರ್ಥಿಕ ನೀತಿ ಪೂರ್ವ ಪರಿಷ್ಕರಣ ಸಭೆಯಲ್ಲಿ ವಿತ್ತಸಚಿವ ಪ್ರಣಬ್ ಮುಖರ್ಜಿ ಹಾಗೂ ಇತರ ಉನ್ನತ ಅಧಿಕಾರಿಗಳೊಂದಿಗೆ ಆರ್ಬಿಐ ಗವರ್ನರ್ ಡಿ.ಸುಬ್ಬಾರಾವ್ ಚರ್ಚಿಸಲಿದ್ದಾರೆ ಎಂದು ವಿತ್ತಸಚಿವಾಲಯದ ಮೂಲಗಳು ತಿಳಿಸಿವೆ.
ಭಾರತೀಯ ರಿಸರ್ವ್ ಬ್ಯಾಂಕ್, ಮಾರುಕಟ್ಟೆಯಲ್ಲಿನ ನಗದು ಹರಿವು ಹಾಗೂ ಹಣದುಬ್ಬರ ನಿಯಂತ್ರಣಕ್ಕಾಗಿ ರೆಪೋ ದರಗಳನ್ನು ಎರಡನೇ ಬಾರಿ ಹೆಚ್ಚಿಸಲಿದೆ ಎಂದು ನಿರೀಕ್ಷಿಸಲಾಗಿದೆ. ಕನಿಷ್ಠ 25 ಬೇಸಿಸ್ ಪಾಯಿಂಟ್ಗಳನ್ನು ಹೆಚ್ಚಿಸುವ ಸಾಧ್ಯತೆಗಳಿವೆ ಎಂದು ಆರ್ಥಿಕ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಇಂಧನ ಅಗತ್ಯ ಅಹಾರ ವಸ್ತುಗಳ ದರ ಏರಿಕೆಯಿಂದಾಗಿ ವಾರ್ಷಿಕ ಹಣದುಬ್ಬರ ದರ, ನಿರಂತರ ಏರಿಕೆಯನ್ನು ನಿಯಂತ್ರಿಸಲು ರೆಪೋ ದರಗಳಲ್ಲಿ ಹೆಚ್ಚಳಗೊಳಿಸುವ ಸಾಧ್ಯತೆಗಳಿವೆ ಎಂದು ಆರ್ಬಿಐ ಮೂಲಗಳು ತಿಳಿಸಿವೆ.