ಸ್ಯಾಮ್ ಪಿತ್ರೋಡಾ ಸಮಿತಿಯ ಶಿಫಾರಸ್ನಂತೆ ಹೂಡಿಕೆ ಹಿಂತೆಗೆತ ಹಾಗೂ ಸ್ವಯಂಪ್ರೇರಿತ ನಿವೃತ್ತಿ ವಿರೋಧಿಸಿ, ಸರಕಾರಿ ಸ್ವಾಮ್ಯದ ಬಿಎಸ್ಎನ್ಎಲ್ನ 3ಲಕ್ಷ ಉದ್ಯೋಗಿಗಳು ಅನಿರ್ಧಿಷ್ಠಾವಧಿ ಮುಷ್ಕರ ಆರಂಭಿಸಿದ್ದಾರೆ
ದೇಶದ ಎಲ್ಲಾ ಕೇಂದ್ರಗಳಲ್ಲಿ ಬೆಳಿಗ್ಗೆ 6ಗಂಟೆಯಿಂದ ಮುಷ್ಕರ ಆರಂಭವಾಗಿದ್ದು, ನವದೆಹಲಿಯಲ್ಲಿ ಬೆಳಿಗ್ಗೆ 10 ಗಂಟೆಯಿಂದ ಆರಂಭವಾಗಿದೆ ಎಂದು ಬಿಎಸ್ಎನ್ಎಲ್ನ ಜಂಟಿ ಕಾರ್ಯಾಚರಣೆ ಸಮಿತಿಯ ಸಂಚಾಲಕ ವಾನ್ ನಂಬೂದರಿ ತಿಳಿಸಿದ್ದಾರೆ.
ಸುಮಾರು ಮೂರು ಲಕ್ಷ ಉದ್ಯೋಗಿಗಳು ನಡೆಸುತ್ತಿರುವ ಮುಷ್ಕರ ಶಾಂತಿಯುತವಾಗಿದೆ. ಆದರೆ ಗ್ರಾಹಕರ ಒಳಬರುವ ಹಾಗೂ ಹೊರಹೊಗುವ ಕರೆಗಳಲ್ಲಿ ಸಂಪರ್ಕದಲ್ಲಿ ಏರುಪೇರಾಗುವ ಸಾಧ್ಯತೆಗಳಿವೆ ಎಂದು ಹೇಳಿದ್ದಾರೆ.
ಏತನ್ಮಧ್ಯೆ ಬಿಎಸ್ಎನ್ಎಲ್ ಹೇಳಿಕೆಯೊಂದನ್ನು ನೀಡಿ, ಸಂಸ್ಥೆಯ ಸುಮಾರು 10,00 ಹಿರಿಯ ಉದ್ಯೋಗಿಗಳು ಕರ್ತವ್ಯ ನಿರ್ವಹಣೆಯಲ್ಲಿದ್ದು, ಮುಷ್ಕರದಲ್ಲಿ ಪಾಲ್ಗೊಳ್ಳುತ್ತಿಲ್ಲ. ಹಿರಿಯ ಅದಿಕಾರಿಗಳು ಹಾಗೂ ಐಟಿಎಸ್ ಹುದ್ದೆಯ ಉದ್ಯೋಗಿಗಳು ಪ್ರತಿಭಟನೆಯಲ್ಲಿ ಪಾಲ್ಗೊಂಡಿಲ್ಲವೆಂದು ಬಿಎಸ್ಎನ್ಎಲ್ನ ವ್ಯವಸ್ಥಾಪಕ ನಿರ್ದೇಶಕ ಕುಲದೀಪ್ ಗೊಯಲ್ ತಿಳಿಸಿದ್ದಾರೆ.
ಬಿಎಸ್ಎನ್ಎಲ್ ಸಂಸ್ಥೆಯ ಹದಗೆಟ್ಟ ಆರ್ಥಿಕ ಸ್ಥಿತಿಗೆ ಚೇತರಿಕೆ ನೀಡಲು, ಒಂದು ಲಕ್ಷ ಸಿಬ್ಬಂದಿಗೆ ಸ್ವಯಂ ಪ್ರೇರಿತ ನಿವೃತ್ತಿ ಮತ್ತು ಶೇ.30ರಷ್ಟು ಹೂಡಿಕೆಯನ್ನು ಹಿಂತೆಗೆದುಕೊಳ್ಳಬೇಕು ಎನ್ನುವ ಸ್ಯಾಮ್ ಪಿತ್ರೋಡಾ ಶಿಪಾರಸ್ಸಿನ ವಿರುದ್ಧ ಉದ್ಯೋಗಿಗಳು ಮುಷ್ಕರ ಆರಂಭಿಸಿದ್ದಾರೆ.