ಅನಿರ್ಧಿಷ್ಟ ಮುಷ್ಕರ ಹಮ್ಮಿಕೊಂಡ ಬಿಎಸ್ಎನ್ಎಲ್ ಉದ್ಯೋಗಿಗಳು ಕೆಲವೇ ಗಂಟೆಗಳಲ್ಲಿ ಮುಷ್ಕರವನ್ನು ಹಿಂತೆಗೆದುಕೊಂಡಿದ್ದಾರೆ.
ಬಿಎಸ್ಎನ್ಎಲ್ ಸಂಸ್ಥೆಯಲ್ಲಿ ಹೂಡಿಕೆ ಹಿಂತೆಗೆತ ಕುರಿತಂತೆ, ಸಚಿವರುಗಳ ಸಭೆಗೆ ಶಿಫಾರಸ್ಸು ಮಾಡಲಾಗುವುದು ಎಂದು ಬಿಎಸ್ಎನ್ಎಲ್ ಮುಖ್ಯಸ್ಥ ಕುಲದೀಪ್ ಗೋಯಲ್ ಭರವಸೆ ನೀಡಿದ ಹಿನ್ನೆಲೆಯಲ್ಲಿ ಮುಷ್ಕರ ಹಿಂಪಡೆಯಲಾಗಿದೆ.
ಹೂಡಿಕೆ ಹಿಂತೆಗೆತ ಕುರಿತಂತೆ ಗ್ರೂಪ್ ಆಫ್ ಮಿನಿಸ್ಟರ್ಸ್ಗೆ ಶಿಫಾರಸ್ಸು ಮಾಡಲಾಗುವುದು. ಯಾವುದೇ ನಿರ್ಧಾರ ತೆಗೆದುಕೊಳ್ಳುವ ಮುನ್ನ, ಬಿಎಸ್ಎನ್ಎಲ್ ಸಂಘಟನೆಗಳನ್ನು ಸಂಪರ್ಕಿಸುತ್ತದೆ ಎಂದು ಸಂಘಟನೆಗಳಿಗೆ ಭರವಸೆ ನೀಡಿದ್ದರಿಂದ ಮುಷ್ಕರ ಸ್ಥಗಿತಗೊಳಿಸಲಾಗಿದೆ ಎಂದು ಕೇಂದ್ರದ ಟೆಲಿಕಾಂ ಸಚಿವ ಎ.ರಾಜಾ ತಿಳಿಸಿದ್ದಾರೆ.
ಎಚ್ಡಿಎಫ್ಸಿ ಬ್ಯಾಂಕ್ ಮುಖ್ಯಸ್ಥ ದೀಪಕ್ ಪಾರೀಖ್ ಹಾಗೂ ಟೆಲಿಕಾಂ ಕಾರ್ಯದರ್ಶಿ ಪಿ.ಜೆ.ಥಾಮಸ್ ಸದಸ್ಯರಾಗಿರುವ ಸ್ಯಾಮ್ ಪಿತ್ರೋಡಾ ನೇತೃತ್ವದ ಸಮಿತಿ, ಬಿಎಸ್ಎನ್ಎಲ್ನಲ್ಲಿ ಆರ್ಥಿಕ ಸುಧಾರಣೆಗಾಗಿ ಶೇ.30ರಷ್ಟು ಹೂಡಿಕೆ ಹಿಂತೆಗೆತ ಹಾಗೂ ಸಂಸ್ಥೆಯ ಒಂದು ಲಕ್ಷ ಉದ್ಯೋಗಿಗಳಿಗೆ ಸ್ವಯಂ ನಿವೃತ್ತಿಗೆ ಶಿಫಾರಸ್ಸು ಮಾಡಿತ್ತು.
ಬಿಎಸ್ಎನ್ಎಲ್ ನೌಕರರ ಸರ್ವೋಚ್ಚ ಸಮಿತಿ ಹೇಳಿಕೆಯೊಂದನ್ನು ನೀಡಿ, ದೇಶದ್ಯಾಂತ ನಡೆದ ಮುಷ್ಕರದಲ್ಲಿ ಸುಮಾರು ಮೂರು ಲಕ್ಷ ಉದ್ಯೋಗಿಗಳು ಮುಷ್ಕರದಲ್ಲಿ ಭಾಗವಹಿಸಿದ್ದರು ಎಂದು ತಿಳಿಸಿದೆ.