ಸತ್ಯಂ ಕಂಪ್ಯೂಟರ್ ಸರ್ವಿಸಸ್ ಮಾಜಿ ಮುಖ್ಯಸ್ಥ ಬಿ.ರಾಮಲಿಂಗಾರಾಜು ಹಗರಣದ ವಿಚಾರಣೆ ನಡೆಸುತ್ತಿರುವ ವಿಶೇಷ ನ್ಯಾಯಾಲಯ, ರಾಮಲಿಂಗಾರಾಜು ಅವರ ಅನಾರೋಗ್ಯದಿಂದಾಗಿ ವೀಡಿಯೋ -ಕಾನ್ಫ್ರೆನ್ಸ್ ಮೂಲಕ ವಿಚಾರಣೆ ನಡೆಸಲು ನಿರ್ಧರಿಸಿದೆ ಎಂದು ನ್ಯಾಯಾಲಯದ ಮೂಲಗಳು ತಿಳಿಸಿವೆ.
ರಾಮಲಿಂಗಾರಾಜು ಅನಾರೋಗ್ಯದಿಂದ ಬಳಲಲುತ್ತಿರುವ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ದಾಖಲಿಸಲಾಗಿದ್ದರಿಂದ, ನ್ಯಾಯಾಲಯದೆದುರು ಹಾಜರಾಗಲು ಸಾಧ್ಯವಾಗುತ್ತಿಲ್ಲ. ಆದ್ದರಿಂದ ವೀಡಿಯೋ ಕಾನ್ಫ್ರೆನ್ಸ್ ಮೂಲಕ ವಿಚಾರಣೆ ನಡೆಸಲು ನ್ಯಾಯಾಲಯಕ್ಕೆ ಮನವಿ ಸಲ್ಲಿಸಲಾಗುವುದು ಎಂದು ಸಿಬಿಐ ಉಪ ಕಾನೂನು ಸಲಹೆಗಾರ ಬಿ.ರವೀಂದ್ರ್ ನಾಥ್ ಹೇಳಿದ್ದಾರೆ.
55 ವರ್ಷ ವಯಸ್ಸಿನ ರಾಮಲಿಂಗಾರಾಜು ಹೆಪಾಟಿಟಿಸ್ -ಸಿ ರೋಗದಿಂದ ಬಳಲುತ್ತಿದ್ದು, ನಿಜಾಮ್ ವೈದ್ಯಕೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಕಳೆದ ಸೆಪ್ಟೆಂಬರ್ ತಿಂಗಳಿನಿಂದ ನ್ಯಾಯಾಂಗ ವಶದಲ್ಲಿರುವ ರಾಮಲಿಂಗಾರಾಜು, ಆರಂಭದಲ್ಲಿ ಹೃದಯಕ್ಕೆ ಸಂಬಂಧಿಸಿದ ಕಾಯಿಲೆಗಳಿಂದ ಆಸ್ಪತ್ರೆಗೆ ದಾಖಲಾಗಿದ್ದರು. ಇದೀಗ ಹೆಪಾಟಿಟಿಸ್-ಸಿ ರೋಗದ ಕಾರಣದಿಂದ ಮತ್ತೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.