ಭಾರತದ ಆರ್ಥಿಕ ವೃದ್ಧಿ ದರ ಪ್ರಸಕ್ತ ಅಂದಾಜು ಮಾಡಲಾಗಿದ್ದ ಶೇ.7.2ಕ್ಕಿಂತ ಅಲ್ಪ ಹೆಚ್ಚಳವಾಗಲಿದೆ. ಆದರೆ ನಿರಂತರ ಏರಿಕೆ ಕಾಣುತ್ತಿರುವ ಹಣದುಬ್ಬರ ದರ ಬಹುದೊಡ್ಡ ಕಳವಳಕ್ಕೆ ಕಾರಣವಾಗಿದೆ ಎಂದು ರಿಸರ್ವ್ ಬ್ಯಾಂಕ್ ಗವರ್ನರ್ ಡಿ.ಸುಬ್ಬಾರಾವ್ ತಿಳಿಸಿದ್ದಾರೆ.
ವಾಷಿಂಗ್ಟನ್ನ ಪೀಟರ್ಸನ್ ಇನ್ಸ್ಟಿಟ್ಯೂಟ್ ಫಾರ್ ಇಂಟರ್ನ್ಯಾಷನಲ್ ಎಕಾನಾಮಿಕ್ಸ್ ಥಿಂಕ್ ಟ್ಯಾಂಕ್ ಸಭೆಯಲ್ಲಿ ಮಾತನಾಡಿದ, ಆರ್ಬಿಐ ಗವರ್ನರ್, ಪ್ರಸಕ್ತ ಆರ್ಥಿಕ ವರ್ಷದಲ್ಲಿ ಆರ್ಥಿಕ ವೃದ್ಧಿ ದರ ಶೇ.8ಕ್ಕೆ ತಲುಪುವ ನಿರೀಕ್ಷೆಗಳಿವೆ ಎಂದು ತಿಳಿಸಿದ್ದಾರೆ.
ಏಷ್ಯಾದ ಬೃಹತ್ ಆರ್ಥಿಕತೆಯನ್ನು ಹೊಂದಿರುವ ರಾಷ್ಟ್ರಗಳಾದ ಚೀನಾ, ಜಪಾನ್ ನಂತರ ಭಾರತ ಸ್ಥಾನವನ್ನು ಪಡೆದಿದ್ದು, ಅಂತಾರಾಷ್ಟ್ರೀಯ ಹಣಕಾಸು ಸಂಸ್ಥೆ ಕೂಡಾ ಪ್ರಸಕ್ತ ಆರ್ಥಿಕ ವರ್ಷದಲ್ಲಿ ಜಿಡಿಪಿ ದರ ಶೇ.8.8ಕ್ಕೆ ತಲುಪಲಿದ್ದು, ಮುಂದಿನ ವರ್ಷಾಂತ್ಯಕ್ಕೆ ಶೇ.8.4ರಷ್ಟಾಗಲಿದೆ ಎಂದು ಹೇಳಿಕೆ ನೀಡಿರುವುದಾಗಿ ವಿವರಣೆ ನೀಡಿದರು.
ಭಾರತದ ಆರ್ಥಿಕ ಅಭಿವೃದ್ಧಿ ಬೃಹತ್ ತಳಹದಿಯ ಮೇಲೆ ಚೇತರಿಸಿಕೊಳ್ಳುತ್ತಿದೆ. ಕೈಗಾರಿಕೋದ್ಯಮ ಅಭಿವೃದ್ಧಿಯಲ್ಲಿ ಏರಿಕೆಯಾಗಿದೆ. ಸಾಲ ನೀಡಿಕೆ ಕ್ಷೇತ್ರದಲ್ಲಿ ಹೆಚ್ಚಳವಾಗಿದೆ. ಖಾಸಗಿ ಕ್ಷೇತ್ರದಲ್ಲಿ ಆರ್ಥಿಕ ಚಟುವಟಿಕೆಯಲ್ಲಿ ಹೆಚ್ಚಳವಾಗಿದೆ ಎಂದು ಹೇಳಿದರು.
ನಿರಂತರ ಏರಿಕೆ ಕಾಣುತ್ತಿರುವ ಹಣದುಬ್ಬರ ಕಳವಳಕ್ಕೆ ಕಾರಣವಾಗಿದೆ. ಸರಬರಾಜಿನ ವ್ಯವಸ್ಥೆಯಲ್ಲಿ ಹಣದುಬ್ಬರ ಇಳಿಕೆಯಾಗುತ್ತಿದೆ. ಬೇಡಿಕೆ ವ್ಯವಸ್ಥೆಯಲ್ಲಿ ಹಣದುಬ್ಬರ ಹೆಚ್ಚಳವಾಗುತ್ತಿದೆ ಎಂದು ಆರ್ಬಿಐ ಗವರ್ನರ್ ಡಿ.ಸುಬ್ಬಾರಾವ್ ತಿಳಿಸಿದ್ದಾರೆ.