ಸದ್ಯದ ಆರ್ಥಿಕ ಪರಿಸ್ಥಿತಿಯಲ್ಲಿ ಪೆಟ್ರೋಲ್ ಬೆಲೆ ಇಳಿಸಲು ಸಾದ್ಯವಾಗುತ್ತಿಲ್ಲ ಎಂದು ಹಣಕಾಸು ಸಚಿವ ಪ್ರಣಬ್ ಮುಖರ್ಜಿ ಸ್ಪಷ್ಟಪಡಿಸಿದ್ದಾರೆ.
ಹಣಕಾಸು ಮಸೂದೆ ಮೇಲೆ ನಡೆದ ಚರ್ಚೆಯ ಸಂದರ್ಭದಲ್ಲಿ ಪೆಟ್ರೋಲ್ ಹಾಗೂ ಡೀಸೆಲ್ ಮೇಲಿನ ಏರಿಕೆ ಹಿಂತೆಗೆದುಕೊಳ್ಳುವಂತೆ ಸರ್ಕಾರವನ್ನು ಒತ್ತಾಯಿಸಿದಾಗ ಸಚಿವರು ಸದನದಲ್ಲಿ ಈ ರೀತಿ ಸ್ಪಷ್ಟನೆ ನೀಡಿದ್ದಾರೆ.
ಬಜೆಟ್ನಲ್ಲಿ ತೈಲೋತ್ಪನ್ನಗಳ ಮೇಲೆ ಅಬಕಾರಿ ಮತ್ತು ಸೀಮಾ ಸುಂಕ ವಿಧಿಸಿದ್ದರಿಂದ ಪೆಟ್ರೋಲ್ ಪ್ರತಿ ಲೀಟರಿಗೆ 2.71ರಂತೆ ಮತ್ತು ಡೀಸೆಲ್ ಪ್ರತಿ ಲೀಟರಿಗೆ 2.55 ರೂಪಾಯಿಗಳಂತೆ ಹೆಚ್ಚಳವಾಗಿತ್ತು.
ಸದಸ್ಯರ ಒತ್ತಡ ಮಿತಿಮೀರಿದಾಗ ಎದ್ದು ನಿಂತ ಸಚಿವ ಪ್ರಣಬ್ ಮುಖರ್ಜಿ, ಪರಿಸ್ಥಿತಿ ಬಹಳ ಕ್ಲಿಷ್ಟಕರವಾಗಿದೆ. ಹಾಗಾಗಿ ಖಂಡಿತ ಈಗ ತೆಲ ಬೆಲೆ ಇಳಿಕೆ ಸಾಧ್ಯವೇ ಇಲ್ಲ. ದಯವಿಟ್ಟು ಎಲ್ಲರೂ ಸಹಕರಿಸಬೇಕು ಎಂದು ಉತ್ತರಿಸಿದರು.
ಇದೇ ಸಂದರ್ಭ ಹಣದುಹಬ್ಬರ ಶೇ.17ರಷ್ಟು ತಲುಪಿರುವುದನ್ನು ಒಪ್ಪಿಕೊಂಡ ಸಚಿವರು, ಪಡಿತರ ವಿತರಣಾ ವ್ಯವಸ್ಥೆಯಲ್ಲಿ ಪರಿಣಾಮಕಾರಿ ಸುಧಾರಣೆ ತಂದು ಮತ್ತು ಬೆಲೆ ನಿಯಂತ್ರಣಕ್ಕೆ ಕ್ರಮ ಕೈಗೊಂಡು, ಬೆಲೆ ಏರಿಕೆ ಮತ್ತು ಹಣದುಬ್ಬರ ಸಮಸ್ಯೆ ಬಗೆಹರಿಸುವುದಾಗಿ ತಿಳಿಸಿದರು.