ರಾಮಲಿಂಗರಾಜು ಆಡಳಿತ ವೇಳೆ ಬಹುಕೋಟಿ ಹಗರಣ ಹಿನ್ನೆಲೆಯಲ್ಲಿ ವಿಶ್ವಬ್ಯಾಂಕ್ನಿಂದ ನಿಷೇಧಕ್ಕೊಳಗಾಗಿದ್ದ ಮಹೀಂದ್ರ ಸತ್ಯಂ ಕಂಪನಿಯನ್ನು ಮರು ಪರಿಶೀಲನೆ ನಡೆಸಲಾಗುತ್ತಿದೆ ಎಂದು ವರದಿಗಳು ಹೇಳಿವೆ.
ಈ ಸಂಬಂಧ ಮನವಿಯನ್ನು ಕಂಪನಿ ಸಲ್ಲಿಸಿದ್ದು, ವಿಶ್ವಬ್ಯಾಂಕ್ ಪರಿಗಣನೆಯಲ್ಲಿದೆ ಎಂದು ಮಹೀಂದ್ರಾ ಸತ್ಯಂ ಸಿಇಒ ಸಿ.ಪಿ. ಗುರ್ನಾನಿ ತಿಳಿಸಿದ್ದಾರೆ.
ಅದೇ ವೇಳೆ ಕಂಪೆನಿ ಜತೆ ಅಧಿಕೃತವಾಗಿ ವಿಶ್ವಬ್ಯಾಂಕ್ ಯಾವಾಗ ಈ ಬಗ್ಗೆ ವಿಚಾರ ವಿನಿಮಯ ನಡೆಸಲಿದೆ ಎಂಬುದರ ಬಗೆಗಿನ ವಿವರರನ್ನು ಗುರ್ನಾನಿ ಬಹಿರಂಗಪಡಿಸಲಿಲ್ಲ.
ರಾಜು ಇದೀಗ ಸತ್ಯಂನಲ್ಲಿ ಇಲ್ಲದಿರುವುದರಿಂದ ಸತ್ಯಂ ಮೇಲೆ ವಿಧಿಸಲಾಗಿದ್ದ ನಿಷೇಧವನ್ನು ವಿಶ್ವ ಬ್ಯಾಂಕ್ ಹಿಂತೆಗೆಯುವ ಸಾಧ್ಯತೆಯಿದೆಯೆಂದು ಉದ್ದಿಮೆ ಮೂಲಗಳು ತಿಳಿಸಿವೆ. ಮಹೀಂದ್ರಾ ಸತ್ಯಂನಲ್ಲೀಗ ನೂತನ ಮಾಲೀಕರು, ಹೊಸ ವ್ಯವಸ್ಥಾಪಕ ಮಂಡಳಿಗಳು ಕಾರ್ಯ ನಿರ್ವಹಿಸುವುದರಿಂದ ವಿಶ್ವ ಬ್ಯಾಂಕ್ ಅಧಿಕಾರಿಗಳ ಅನುಕಂಪಕ್ಕೆ ಪಾತ್ರವಾಗುತ್ತಿದೆ.
ಸತ್ಯಂ ಕಂಪೆನಿ ಮೇಲಿನ ನಿಷೇಧವು 2008 ಸೆಪ್ಟೆಂಬರ್ 22ಕ್ಕೆ ಜಾರಿಗೆ ಬರುವಂತೆ ವಿಶ್ವ ಬ್ಯಾಂಕ್ ವಿಧಿಸಿತ್ತು. ಆಗ ಸತ್ಯಂ ಕಂಪ್ಯೂಟರ್ಸ್ ಎಂಬ ಹೆಸರಿನಲ್ಲಿ ಈ ಸಂಸ್ಥೆ ಕಾರ್ಯಾಚರಿಸುತ್ತಿತ್ತು.