ಸರ್ಕಾರಿ ಸ್ವಾಮ್ಯದ ವಿಮಾನಯಾನ ಸಂಸ್ಥೆ ಏರ್ ಇಂಡಿಯಾದ ನಷ್ಟದ ಪ್ರಮಾಣದಲ್ಲಿ ಗಮನಾರ್ಹ ಇಳಿಕೆಯಾಗಿದೆ ಎಂದು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ.
ಲೋಕಸಭೆಯ ಪ್ರಶ್ನೋತ್ತರ ವೇಳೆಯಲ್ಲಿ ಏರ್ ಇಂಡಿಯಾ ಹಾಗೂ ಇಂಡಿಯನ್ ಏರ್ಲೈನ್ಸ್ ವಿಲೀನಗೊಂಡ ಬಳಿಕ ನಷ್ಟವು ಹೆಚ್ಚಾಗುತ್ತಲೇ ಇದೆ ಎಂಬ ಟೀಕೆ ವ್ಯಕ್ತಪಡಿಸಿದ ಸಂದರ್ಭ ಉತ್ತರಿಸಿದ ಕೇಂದ್ರ ನಾಗರಿಕ ವಿಮಾನಯಾನ ಸಚಿವ ಪ್ರಫುಲ್ ಪಟೇಲ್ ಈ ಸ್ಪಷ್ಟೀಕರಣ ನೀಡಿದ್ದಾರೆ.
ಏರ್ ಇಂಡಿಯಾ ಹಾಗೂ ಇಂಡಿಯನ್ ಏರ್ಲೈನ್ಸ್ ವಿಲೀನೀಕರಣ ಪ್ರಕ್ರಿಯೆಯಿಂದ ಉಂಟಾಗುತ್ತಿರುವ ಸಮಸ್ಯೆಗಳು ದುಷ್ಪರಿಣಾಮ ಬೀರುತ್ತಿದೆ ಎಂಬುದನ್ನು ಇದೇ ವೇಳೆ ಒಪ್ಪಿಕೊಂಡ ಸಚಿವರು , ತುಂಬಾ ಭರವಸೆ ಇಟ್ಟುಕೊಂಡೇ ವಿಲೀನೀಕರಣ ಆರಂಭಿಸಲಾಗಿದೆ. ಈ ಹಂತದಲ್ಲಿ ಕೆಲವು ಸಂಗತಿಗಳನ್ನು ಸೂಕ್ಷ್ಮವಾಗಿ ಪರಿಶೀಲಿಸಬೇಕಿದೆ. ಈ ಕಾರ್ಯ ಪೂರ್ಣ ಕೊನೆಗೊಳ್ಳಲು ಮೂರು ವರ್ಷ ಬೇಕಾಗುತ್ತದೆ. ಯುಪಿಎ ಆಡಳಿತಾವಧಿಯಲ್ಲಿ ಏರ್ ಇಂಡಿಯಾ ಸರ್ಕಾರಿ ಸ್ವಾಮ್ಯದಲ್ಲೇ ಉಳಿಯಲಿದೆ ಎಂದು ಸಚಿವರು ಸ್ಪಷ್ಟಪಡಿಸಿದರು.