ಮಂಗಳೂರು ವಿಮಾನ ನಿಲ್ದಾಣಕ್ಕೆ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಮಾನ್ಯತೆ ನೀಡಲು ಎಲ್ಲಾ ಅರ್ಹತೆ ಇದೆ ಎಂದು ಕೇಂದ್ರ ಕಾನೂನು ಸಚಿವ ಎಂ.ವೀರಪ್ಪ ಮೊಯ್ಲಿ ಅಭಿಪ್ರಾಯವ್ಯಕ್ತಪಡಿಸಿದ್ದಾರೆ.
ಮಂಗಳೂರು ವಿಮಾನ ನಿಲ್ದಾಣ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು, ಇದಕ್ಕೆ ಅಗತ್ಯವಿರುವ ತಾಂತ್ರಿಕ ವಿಚಾರವನ್ನು ಸಚಿವ ಪ್ರಫುಲ್ ಪಟೀಲ್ ಕೈಗೆತ್ತಿಕೊಂಡು ಮಾನ್ಯತೆ ನೀಡುವಂತೆ ಮಾಡಬೇಕು ಎಂದು ಮನವಿ ಮಾಡಿದರು.
ರಾಜ್ಯದಲ್ಲಿರುವ ರಾಷ್ಟ್ರೀಯ ಹೆದ್ದಾರಿ, ರೈಲ್ವೇ, ಬಂದರು, ವಿಮಾನ ನಿಲ್ದಾಣ ಅಭಿವೃದ್ದಿಗಾಗಿ ಕೇಂದ್ರ ಹಣ ಮಂಜೂರಾತಿ ಮಾಡಲಿದ್ದು, ಅದರ ಸಮಗ್ರ ಅನುಷ್ಠಾನಕ್ಕಾಗಿ ಮುಖ್ಯಮಂತ್ರಿ ನೇತೃತ್ವದಲ್ಲಿ ಟಾಸ್ಕ್ಫೋರ್ಸ್ ರಚಿಸುವುದು ಒಳ್ಳೆಯದು ಎಂದು ಮೊಯ್ಲಿ ಸಲಹೆ ನೀಡಿದರು. ನವ ಮಂಗಳೂರು ಬಂದರಿನ ಸಮಗ್ರ ಅಭಿವೃದ್ದಿಗೆ 900 ಕೋಟಿ ರೂ.ಗಳ ಬೃಹತ್ ಯೋಜನೆ ಕೇಂದ್ರದ ಕ್ಯಾಬಿನೆಟ್ ಮುಂದಿದೆ ಎಂದರು.
ಕೇಂದ್ರ ಸರಕಾರ ರಸ್ತೆಗಳ ಅಭಿವೃದ್ದಿಗಾಗಿ 80,000 ಕೋಟಿ ಹಾಗೂ ವಿಮಾನ ನಿಲ್ದಾಣ ಅಭಿವೃದ್ದಿಗಾಗಿ 40,000 ಕೋಟಿ ರೂ. ಹಣ ಮೀಸಲಿಟ್ಟಿದೆ. ಮುಂದಿನ ಎರಡು ವರ್ಷಗಳಲ್ಲಿ ಚೀನಾ ಬಿಟ್ಟರೆ ಇಡೀ ವಿಶ್ವದಲ್ಲಿ ಶೇ.10 ಪ್ಲಸ್ ಜಿಡಿಪಿಯಷ್ಟು ಆರ್ಥಿಕ ಪ್ರಗತಿ ಭಾರತದಲ್ಲಿ ದಾಖಲಾಗಲಿದೆ. ಅಭಿವೃದ್ದಿ ಮಾಡುವ ಸಂದರ್ಭ ನಿರ್ವಸಿತರಾದವರಿಗೆ ಸೂಕ್ತ ಪರಿಹಾರ ನೀಡಬೇಕು ಎಂದರು.