ಸಮುದ್ರ ಮಟ್ಟದಿಂದ 13,500 ಅಡಿ ಎತ್ತರದಲ್ಲಿರುವ ಅಮರನಾಥ್ ದೇವಾಲಯಕ್ಕೆ ಭೇಟಿ ನೀಡುವ ಯಾತ್ರಿಗಳಿಗೆ, ಜೂನ್ 30ರೊಳಗಾಗಿ ಮೊಬೈಲ್ ಸಂಪರ್ಕ ಒದಗಿಸಲಾಗುವುದು ಎಂದು ಕಮ್ಯೂನಿಕೇಶನ್ ಮತ್ತು ಮಾಹಿತಿ ತಂತ್ರಜ್ಞಾನ ಖಾತೆ ರಾಜ್ಯ ಸಚಿವ ಸಚಿನ್ ಪೈಲಟ್ ಹೇಳಿದ್ದಾರೆ.
ಭಾರತ ಸಂಚಾರ ನಿಗಮ ಲಿಮಿಟೆಡ್(ಬಿಎಸ್ಎನ್ಎಲ್), ಗ್ರಾಮೀಣ, ಇತರ ದುರ್ಗಮ ಪ್ರದೇಶಗಳಿಗೆ ಕೂಡಾ ಮೊಬೈಲ್ ಸಂಪರ್ಕ ಸೌಲಭ್ಯವನ್ನು ಒದಗಿಸಲು ನಿರಂತರವಾಗಿ ಪ್ರಯತ್ನಿಸುತ್ತಿದೆ ಎಂದು ಪೈಲಟ್ ತಿಳಿಸಿದ್ದಾರೆ.
ಶ್ರೀ ಅಮರನಾಥ್ ದೇವಾಲಯಕ್ಕೆ ಪ್ರತಿನಿತ್ಯ ಲಕ್ಷಾಂತರ ಭಕ್ತರು ಭೇಟಿ ನೀಡುತ್ತಲಿದ್ದು,ಎಲ್ಲಾ ಧರ್ಮದವರು ತೆರಳುವ ಧಾರ್ಮಿಕ ಹಾಗೂ ಪ್ರವಾಸಿ ತಾಣವಾಗಿದೆ.
ಪ್ರತಿ ವರ್ಷ ಸುಮಾರು ನಾಲ್ಕು ಲಕ್ಷ ಭಕ್ತರು ಅಮರನಾಥ್ ದೇವಾಲಯಕ್ಕೆ ಭೇಟಿ ನೀಡುತ್ತಾರೆ. ವಿಶೇಷವಾಗಿ ಹಿರಿಯರು ಅಮರನಾಥ್ ಯಾತ್ರೆಗೆ ತೆರಳುವುದರಿಂದ, ಕುಟುಂಬದವರು ನಿರಂತರ ಸಂಪರ್ಕದಲ್ಲಿರಲು ನೆರವಾಗುತ್ತದೆ ಎಂದು ಪೈಲಟ್ ಅಭಿಪ್ರಾಯಪಟ್ಟಿದ್ದಾರೆ.
ಗ್ರಾಹಕರಿಗೆ ಮೊಹೈಲ್ ಸಂಪರ್ಕ ಕಲ್ಪಿಸಲು, ಬಲ್ತಾಳ್ -1, ಬಲ್ತಾಲ್-2 ಡೊಮೇಲ್, ಬರಾರಿ, ಸಂಗಂ/ಹೋಳಿ ಗುಹೆ, ಪಂಚಾಟಮಿ, ಮಹಾಗುಣಸ್ಟಾಪ್,ಶೇಶ್ನಾಗ್ ಮತ್ತು ಚಂದನ್ವಾಡಿಗಳಲ್ಲಿ ಬಿಎಸ್ಎನ್ಎಲ್ ಸಂಸ್ಥೆ ಟವರ್ಗಳನ್ನು ನಿರ್ಮಿಸಲು ಉದ್ದೇಶಿಸಿದೆ ಎಂದರು.
ಮೊಬೈಲ್ ಸಂಪರ್ಕ ನೀಡುವುದರಿಂದ, ಯಾತ್ರೆಗೆ ತೆರಳುವ ಯಾತ್ರಿಗಳು ಪರಸ್ಪರ ಸಂಪರ್ಕದಲ್ಲಿರಲು ಸಾಧ್ಯವಾಗಿ, ಮತ್ತಷ್ಟು ಹೆಚ್ಚಿನ ಸೌಲಭ್ಯ ಒದಗಿಸಲು ನೆರವಾಗುತ್ತದೆ. ಪ್ರಸ್ತುತ ಅಮರ್ನಾಥ್ನಲ್ಲಿ ಯಾವುದೇ ಟೆಲಿಕಾಂ ಕಂಪೆನಿ ಕಾರ್ಯನಿರ್ವಹಿಸುತ್ತಿಲ್ಲ ಎಂದು ಸಚಿವ ಸಚಿನ್ ಪೈಲಟ್ ತಿಳಿಸಿದ್ದಾರೆ.