ಮಂಗಳೂರಿನಲ್ಲಿ ನಡೆದ ಏರ್ ಇಂಡಿಯಾ ಎಕ್ಸ್ಪ್ರೆಸ್ ವಿಮಾನ ದುರಂತದ ಬಿಸಿ ವಿಮಾ ಕಂಪೆನಿಗಳಿಗೆ ತಟ್ಟಿದೆ. ದುರಂತದಲ್ಲಿ ಮೃತರಾದವರ ಕುಟುಂಬಗಳು ನೂರಾರು ಕೋಟಿ ರೂಪಾಯಿಗಳ ವಿಮಾ ಹಣವನ್ನು ಪಡೆಯಲು ಸಿದ್ಧತೆ ನಡೆಸುತ್ತಿದ್ದಾರೆ.
ಬೋಯಿಂಗ್ 737-800 ವಿಮಾನ ದುರಂತದಲ್ಲಿ 158 ಮಂದಿ ಪ್ರಯಾಣಿಕರು ಮೃತರಾಗಿದ್ದು, ವಿಮೆ ಮಾಡಿದ ಕುಟುಂಬಗಳು ಒಟ್ಟಾರೆಯಾಗಿ 350-400 ಕೋಟಿ ರೂಪಾಯಿಗಳ ಪರಿಹಾರ ಧನವನ್ನು ಹಂಚಿಕೊಳ್ಳುವ ಸಾಧ್ಯತೆಗಳಿವೆ ಎಂದು ಮೂಲಗಳು ತಿಳಿಸಿವೆ.
ಏರ್ಇಂಡಿಯಾ ಎಕ್ಸ್ಪ್ರೆಸ್ ಕಂಪೆನಿ, ನಾಲ್ಕು ಖಾಸಗಿ ಕ್ಷೇತ್ರದ ಕಂಪೆನಿಗಳಾದ ರಿಲಯನ್ಸ್ ಜನರಲ್ ಇನ್ಶ್ಯೂರೆನ್ಸ್ ಕಂಪೆನಿ ಲಿಮಿಟೆಡ್, ಎಚ್ಡಿಎಫ್ಸಿ ಎರ್ಗೊ, ಬಜಾಜ್ ಅಲಿಯಂಝ್ ಮತ್ತು ಟೋಕಿಯೋದ ಇಫ್ಕೋ ವಿಮಾ ಕಂಪೆನಿಗಳಲ್ಲಿ, ಒಟ್ಟು 136 ವಿಮಾನಗಳಿಗೆ 8.59 ಬಿಲಿಯನ್ ಡಾಲರ್ಗಳ ವಿಮೆಯನ್ನು ಹೊಂದಿದ್ದು, ವಾರ್ಷಿಕವಾಗಿ 24.3 ಮಿಲಿಯನ್ ಡಾಲರ್ ವಿಮಾ ಹಣವನ್ನು ಪಾವತಿಸುತ್ತಿದೆ.
ವೈಮಾನಿಕ ಉದ್ಯಮದ ತಜ್ಞರ ಪ್ರಕಾರ, ಏರ್ ಇಂಡಿಯಾ ಸಂಸ್ಥೆ ,ವಿಮಾ ಸಂಸ್ಥೆಗಳಿಂದ ಕನಿಷ್ಠ 300 ಕೋಟಿ ರೂಪಾಯಿಗಳ ವಿಮಾ ಹಣವನ್ನು ಪಡೆಯಲಿದ್ದು, ಪ್ರಯಾಣಿಕರು ಹಾಗೂ ಸರಕು ಸಾಗಣೆ ಪರಿಹಾರವಾಗಿ ಮತ್ತೆ 100 ಕೋಟಿ ರೂಪಾಯಿ ವಿಮೆ ಪಡೆಯುವ ಸಾಧ್ಯತೆಗಳಿವೆ ಎಂದು ತಿಳಿಸಿದ್ದಾರೆ.
ಏರ್ಇಂಡಿಯಾ ಸಂಸ್ಥೆ ದುರಂತದಲ್ಲಿ ಮಡಿದವರ ಕುಟುಂಬಗಳಿಗಾಗಿ 10 ಲಕ್ಷ ರೂಪಾಯಿ ಮದ್ಯಂತರ ಪರಿಹಾರವನ್ನು ಘೋಷಿಸಿರುವುದು ಮೊಂಟೆರಿಯಲ್ ಒಪ್ಪಂದದ ಪ್ರಕಾರ ತೀರಾ ಕಡಿಮೆಯಾಗಿದೆ. ದುರಂತದಲ್ಲಿ ಸಾವನ್ನಪ್ಪಿದ ವ್ಯಕ್ತಿಯ ಕುಟುಂಬದವರು ಕನಿಷ್ಠ 75 ಲಕ್ಷ ರೂಪಾಯಿಗಳ ವಿಮೆ ಹಣವನ್ನು ಪಡೆಯಬಹುದಾಗಿದೆ. ಏರ್ಲೈನ್ಸ್ನ ನಿರ್ಲಕ್ಷ್ಯತೆ ಹಾಗೂ ಮಾನವ ದೋಷದಿಂದಾಗಿ ನ್ಯಾಯಾಲಯದಲ್ಲಿ ಪ್ರಕರಣವನ್ನು ದಾಖಲಿಸಬಹುದಾಗಿದೆ ಎಂದು ವಿಮಾ ಸಂಸ್ಥೆಯ ಬ್ರೋಕರ್ ಕಚೇರಿಯ ಮೂಲಗಳು ತಿಳಿಸಿವೆ.
ಏರ್ ಇಂಡಿಯಾ ಮತ್ತು ವಿಮಾ ಕಂಪೆನಿಗಳ ಮದ್ಯೆ ವಿಮೆ ಪಾವತಿ ಕುರಿತಂತೆ ನ್ಯಾಯಾಲಯದಲ್ಲಿ ದೀರ್ಘಾವಧಿ ಹೋರಾಟ ನಡೆಯುವ ಸಾಧ್ಯತೆಗಳಿವೆ ಎಂದು ಇತರ ವಿಮಾ ಕಂಪೆನಿಗಳ ಅಧಿಕಾರಿಗಳು ತಿಳಿಸಿದ್ದಾರೆ.