ಏರ್ಇಂಡಿಯಾ ನೌಕರರ ಮುಷ್ಕರ ಕಾನೂನುಬಾಹಿರವಾಗಿದ್ದು, ಮುಷ್ಕರ ನಿರತರ ವಿರುದ್ಧ ಕಠಿಣ ಕ್ರಮಗಳನ್ನು ತೆಗೆದುಕೊಳ್ಳಲು .ಅಡಳಿತ ಮಂಡಳಿ ಮುಕ್ತವಾಗಿದೆ ಎಂದು ಕೇಂದ್ರ ನಾಗರಿಕ ವಿಮಾನಯಾನ ಖಾತೆ ಸಚಿವ ಪ್ರಫುಲ್ ಪಟೇಲ್ ಎಚ್ಚರಿಸಿದ್ದಾರೆ..
ಏರ್ಇಂಡಿಯಾ ನೌಕರರು ಹಮ್ಮಿಕೊಂಡ ಮುಷ್ಕರ ಅನಧಿಕೃತವಾಗಿದ್ದು, ಕೆಲ ವಿಭಾಗಗಳ ಸಿಬ್ಬಂದಿಗಳು ಬೇಜವಾಬ್ದಾರಿಯಿಂದ ವರ್ತಿಸುತ್ತಿದ್ದಾರೆ.ಏರ್ ಇಂಡಿಯಾ ಅಡಳಿತ ಮಂಡಳಿ ಪರಿಸ್ಥಿತಿಯನ್ನು ನಿಭಾಯಿಸಲು ಕಠಿಣ ಕ್ರಮಗಳನ್ನು ತೆಗೆದುಕೊಳ್ಳಲು ಮುಕ್ತವಾಗಿದೆ ಎಂದು ನೌಕರರ ಮತ್ತು ಅಡಳಿತ ಮಂಡಳಿಯ ಮೊದಲ ಸುತ್ತಿನ ಮಾತುಕತೆ ವಿಫಲವಾದ ನಂತರ, ಸಚಿವ ಪಟೇಲ್ ಸುದ್ದಿಗಾರರಿಗೆ ತಿಳಿಸಿದ್ದಾರೆ.
ಮುಷ್ಕರ ನಿರತ ನೌಕರರನ್ನು ತರಾಟೆಗೆ ತೆಗೆದುಕೊಂಡ ಸಚಿವ ಪಟೇಲ್, ಏರ್ಇಂಡಿಯಾ ಸಂಸ್ಥೆ ತುಂಬಾ ಕಠಿಣವಾದ ಪರಿಸ್ಥಿತಿಯನ್ನು ಎದುರಿಸುತ್ತಿದೆ. ವೆಚ್ಚ ಕಡಿತದಂತಹ ನಿಯಮಗಳನ್ನು ಪಾಲಿಸಲಾಗುತ್ತಿದೆ.ಸಿಬ್ಬಂದಿಗಳಿಗೆ ನೋವುಂಟು ಮಾಡಬಾರದು ಎಂದು ಅಡಳಿತ ಮಂಡಳಿ ಬಯಸುತ್ತದೆ. ಒಂದು ವೇಳೆ ನೌಕರರು ಮುಷ್ಕರವನ್ನು ಮುಂದುವರಿಸಿದಲ್ಲಿ, ತಾವು ಕುಳಿತ ರೆಂಬೆಯನ್ನು ತಾವೇ ಕತ್ತರಿಸಿದಂತಾಗುತ್ತದೆ ಎಂದು ಕಿಡಿಕಾರಿದ್ದಾರೆ.
ಏರಿಂಡಿಯಾ ನೌಕರರ ಸಂಘಟನೆಗಳ ಮುಖಂಡರು, ಏರ್ಇಂಡಿಯಾ ಸುರಕ್ಷತೆಯ ಬಗ್ಗೆ ಸಾರ್ವಜನಿಕವಾಗಿ ಹೇಳಿಕೆ ನೀಡುವುದನ್ನು ವಿರೋಧಿಸಿ, ಅಡಳಿತ ಮಂಡಳಿ ವಾಕ್ಸ್ವಾತಂತ್ರ್ಯ ನಿರ್ಬಂಧ ಆದೇಶವನ್ನು ಹೊರಡಿಸಿತ್ತು. ಆದೇಶವನ್ನು ವಿರೋಧಿಸಿ, ಸಂಸ್ಥೆಯ 20,000 ಸಿಬ್ಬಂದಿಗಳು ದಿಢೀರ್ ಮುಷ್ಕರ ಆರಂಭಸಿದ್ದು, ಇದೀಗ ಎರಡನೇ ದಿನಕ್ಕೆ ಕಾಲಿರಿಸಿದೆ.