ದೇಶದ ಖ್ಯಾತ ಉದ್ಯಮಿಗಳಾದ ರಿಲಯನ್ಸ್ನ ಮುಕೇಶ್ ಅಂಬಾನಿ, ಭಾರ್ತಿ ಮುಖ್ಯಸ್ಥ ಸುನೀಲ್ ಮಿತ್ತಲ್ ಮತ್ತು ಐಸಿಐಸಿಐ ಸಿಇಒ ಚಂದಾ ಕೋಚರ್,ಪ್ರಧಾನಿ ಮನಮೋಹನ್ ಸಿಂಗ್ ಅವರ ಅಧಿಕೃತ ನಿವಾಸದಲ್ಲಿ ಭೇಟಿಯಾಗಿದ್ದಾರೆ ಎಂದು ಪ್ರಧಾನಿ ಕಚೇರಿಯ ಮೂಲಗಳು ತಿಳಿಸಿವೆ.
ಪ್ರಧಾನಮಂತ್ರಿಗಳ ಟ್ರೇಡ್ ಅಡ್ವೈಸರಿ ಕೌನ್ಸಿಲ್ ಸಭೆಯಲ್ಲಿ ದೇಶದ ಕೈಗಾರಿಕೋದ್ಯಮ ಬಾಗೂ ಬ್ಯಾಂಕಿಂಗ್ ಕ್ಷೇತ್ರಗಳ ವಹಿವಾಟಿನ ಬಗ್ಗೆ ಚರ್ಚಿಸಲು ಉದ್ಯಮಿಗಳು ಸಭೆಯಲ್ಲಿ ಪಾಲ್ಗೊಂಡಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇತರ ಖ್ಯಾತ ಉದ್ಯಮಿಗಳಾದ ಆರ್.ಪಿ.ಗೋಯಿಂಕಾ ಮತ್ತು ದೀಪಕ್ ಪಾರಿಖ್ ಸಭೆಯಲ್ಲಿ ಉಪಸ್ಥಿತರಿದ್ದು,ಸಭೆಯಲ್ಲಿ ವಿತ್ತಸಚಿವ ಪ್ರಣಬ್ ಮುಖರ್ಜಿ ಕೂಡಾ ಹಾಜರಿದ್ದರು ಎನ್ನಲಾಗಿದೆ.
ರಿಲಯನ್ಸ್ನ ಅನಿಲ್ ಧೀರುಭಾಯಿ ಅಂಬಾನಿ ಗ್ರೂಪ್ ಮುಖ್ಯಸ್ಥ ಅನಿಲ್ ಅಂಬಾನಿ, ಸಭೆಗೆ ಹಾಜರಾಗುವ ಸಾಧ್ಯತೆಗಳಿವೆ ಎಂದು ಪ್ರಧಾನಿ ಕಚೇರಿಯ ಮೂಲಗಳು ತಿಳಿಸಿವೆ.
ಒಂದು ವೇಳೆ ಅನಿಲ್ ಅಂಬಾನಿ ಸಭೆಗೆ ಆಗಮಿಸಿದಲ್ಲಿ, ಸುಮಾರು ಎರಡು ವರ್ಷಗಳ ನಂತರ ಸಹೋದರರು ಒಂದೇ ಸಭೆಯಲ್ಲಿ ಭಾಗವಹಿಸಿದಂತಾಗುತ್ತದೆ.
ಕಳೆದ ವಾರ, ಅನಿಲ್ ಮತ್ತು ಮುಕೇಶ್ ಅಂಬಾನಿ ಕೆಜಿ ಬೇಸಿನ್ ವಿವಾದ ಒಪ್ಪಂದವನ್ನು ಬಗೆಹರಿಸಿಕೊಳ್ಳುವಂತೆ ಅಪೆಕ್ಸ್ ನ್ಯಾಯಾಲಯದ ಸಲಹೆಗೆ ಮಹತ್ವ ನೀಡಿ ಶಾಂತಿ ಪ್ರಸ್ತಾಪವನ್ನು ಘೋಷಿಸಿದ್ದರು.