ಖಾರಿಫ್ ಬೆಳೆಗಳು ಮಾರುಕಟ್ಟೆಗೆ ಬಂದ ನಂತರ , ಅಹಾರ ಹಣದುಬ್ಬರ ದರ ಮುಂಬರುವ ನವೆಂಬರ್ ವೇಳೆಗೆ ಶೇ.4-5ಕ್ಕೆ ಇಳಿಕೆಯಾಗುವ ಸಾಧ್ಯತೆಗಳಿವೆ ಎಂದು ಯೋಜನಾ ಆಯೋಗದ ಸದಸ್ಯ ಅಭಿಜಿತ್ ಸೇನ್ ಹೇಳಿದ್ದಾರೆ.
ದೇಶದ ಕೃಷಿ ಕ್ಷೇತ್ರದ ಅಭಿವೃದ್ಧಿಯಲ್ಲಿ ಋಣಾತ್ಮಕ ಶೇ. 0.2ರಿಂದ ಧನಾತ್ಮಕ ಶೇ.0.2ಕ್ಕೆ ಏರಿಕೆ ಕಂಡಿದೆ ಎಂದು ಸೇನ್ ತಿಳಿಸಿದ್ದಾರೆ.
ರಬಿ ಬೆಳೆ ಮಾರುಕಟ್ಟೆಗೆ ಬಂದ ನಂತರ ಕಳೆದ ಮಾರ್ಚ್ ತಿಂಗಳಿನಿಂದ ಅಹಾರ ದರಗಳು ಇಳಿಕೆಯಾಗುತ್ತಿದ್ದು, ಈರುಳ್ಳಿ ಮತ್ತು ಆಲೂಗಡ್ಡೆ ದರಗಳಲ್ಲಿ ಅಲ್ಪ ಇಳಿಕೆಯಾಗಿದೆ. ಆದರೆ ಒಟ್ಟಾರೆ ದರಗಳಲ್ಲಿ ಏರಿಕೆಯಾಗಿದೆ. ಖಾರೀಪ್ ಸೀಜನ್ನಂತರ ದರಗಳಲ್ಲಿ ಇಳಿಕೆಯಾಗಲಿವೆ ಎಂದು ಸೇನ್ ಸುದ್ದಿಗಾರರಿಗೆ ತಿಳಿಸಿದ್ದಾರೆ.
ಏತನ್ಮಧ್ಯೆ, ತರಕಾರಿ ಮತ್ತು ಹಣ್ಣು ದರಗಳ ಏರಿಕೆಯಿಂದಾಗಿ ಅಹಾರ ಹಣದುಬ್ಬರ ದರ ಮೇ 8ಕ್ಕೆ ಅಂತ್ಯಗೊಂಡಂತೆ ಶೇ.16.49ಕ್ಕೆ ತಲುಪಿದೆ.
ಕಳೆದ ವಾರ, ಪ್ರಧಾನಮಂತ್ರಿ ಮನಮೋಹನ್ ಸಿಂಗ್ ಮಾತನಾಡಿ, ಡಿಸೆಂಬರ್ ವೇಳೆಗೆ ಒಟ್ಟಾರೆ ಅಹಾರ ಹಣದುಬ್ಬರ ದರ ಶೇ.5-6ಕ್ಕೆ ಇಳಿಕೆಯಾಗುವ ಸಾಧ್ಯತೆಗಳಿವೆ ಎಂದು ತಿಳಿಸಿದ್ದಾರೆ.