ಅನಿಲ್ ಅಂಬಾನಿ ತಮ್ಮ ಸಂಸಾರ ಸಮೇತ ಭಾನುವಾರ ತಮ್ಮ ಇಷ್ಟದೈವ ತಿರುಪತಿ ತಿರುಮಲಕ್ಕೆ ಭೇಟಿ ನೀಡಿದು. ವಿಶೇಷವೆಂದರೆ ಈ ಬಾರಿಯ ಭೇಟಿ ಸಮಯದಲ್ಲಿ ಅನಿಲ್ ಅಂಬಾನಿ ಕುಟುಂಬ ಉಳಿದುಕೊಂಡಿದ್ದು, ಅಣ್ಣ ಮುಖೇಶ್ ಅಂಬಾನಿ ಒಡೆತನದ ಗೆಸ್ಟ್ ಹೌಸಿನಲ್ಲಿ.
ಹೌದು. ಇತ್ತೀಚೆಗಷ್ಟೇ ಹಾವು ಮುಂಗುಸಿಗಳಿಂತಿದ್ದ ಅಂಬಾನಿ ಸಹೋದರರು ರಾಜಿಯಾಗಿದ್ದು, ಇನ್ನು ಮುಂದೆ ತಮ್ಮ ನಡುವೆ ಯಾವುದೇ ಭಿನ್ನಾಭಿಪ್ರಾಯಗಳಿಲ್ಲ, ಕೇವಲ ಉದ್ಯಮದಲ್ಲಿನ ಸ್ಪರ್ಧೆ ಮಾತ್ರ ಹಾಗೆಯೇ ಮುಂದುವರಿಯುತ್ತದೆ ಎಂದಿದ್ದರು.
ಶನಿವಾರ ರಾತ್ರಿಯೇ ತಿರುಪತಿಗೆ ಬಂದಿಳಿದ ಅನಿಲ್ ಅಂಬಾನಿ ಬೆಳಗ್ಗೆ 11 ಗಂಟೆ ಸುಮಾರಿಗೆ ದೇವರ ದರ್ಶನಕ್ಕೆ ಎಂಟು ಕಿ.ಮೀ ದೂರವನ್ನು ಕಾಲ್ನಡಿಗೆಯಲ್ಲೇ ಕ್ರಮಿಸಿದರು. ಸಾಮಾನ್ಯವಾಗಿ ಈ ಎಂಟು ಕಿಮೀ ಕ್ರಮಿಸಲು ಮೂರು ಗಂಟೆ ತೆಗೆದುಕೊಂಡರೆ, ಅನಿಲ್ ಅಂಬಾನಿ ಮಾತ್ರ ಎರಡೇ ಗಂಟೆಗಳಲ್ಲಿ ಅಂದರೆ 1 ಗಂಟೆ ಸಮಯಕ್ಕೆ ಸರಿಯಾಗಿ ಮುಖ್ಯದ್ವಾರಕ್ಕೆ ತಲುಪಿದ್ದರು. ಆದರೆ ಅವರ ಪತ್ನಿ ಮಾತ್ರ ಕಾರಿನಲ್ಲಿ ಅಲ್ಲಿಗೆ ತಲುಪಿದ್ದರು.
ಈ ಹಿಂದೆಯೂ ಅನಿಲ್ ಅಂಬಾನಿ ಹಲವು ಬಾರಿ ಕುಟುಂಬ ಸಮೇತ ತಿರುಪತಿ ದರ್ಶನಕ್ಕೆ ಬಂದಿದ್ದರೂ, ಮುಖೇಶ್ ಅಂಬಾನಿ ಒಡೆತನದ ಶ್ರೀ ಕೃಷ್ಣ ಗೆಸ್ಟ್ ಹೌಸಿನಲ್ಲಿ ಉಳಿದುಕೊಂಡಿರಲಿಲ್ಲ. ಶ್ರೀವಾಸ್ತವಂ ಎಂಬ ಗೆಸ್ಟ್ ಹೌಸಿನಲ್ಲಿ ಉಳಿದುಕೊಳ್ಳುತ್ತಿದ್ದರು. ಇದೇ ಮೊದಲ ಬಾರಿಗೆ ಉಳಿದುಕೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.