ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » ವಿಐಪಿ ಎಫೆಕ್ಟ್: ಆಗಸದಲ್ಲೇ ಜನಸಾಮಾನ್ಯರ ವಿಮಾನಗಳ ಇಂಧನ ಖಾಲಿ! (Mangalore Air Crash | Prathibha Patil | kingfisher | VIP flights)
ವಿಐಪಿ ಎಫೆಕ್ಟ್: ಆಗಸದಲ್ಲೇ ಜನಸಾಮಾನ್ಯರ ವಿಮಾನಗಳ ಇಂಧನ ಖಾಲಿ!
ಚೆನ್ನೈ, ಸೋಮವಾರ, 31 ಮೇ 2010( 17:47 IST )
PTI
ಮಂಗಳೂರು ವಿಮಾನ ದುರಂತ ನಡೆದು ಕೆಲವೇ ದಿನಗಳಲ್ಲಿ ಮೂರು ವಿಮಾನಗಳು ಆಕಾಶದಲ್ಲಿ ಹಾರಾಟ ನಡೆಸುತ್ತಿರುವಾಗಲೇ ಇಂಧನ ಖಾಲಿಯಾದಂತಹ ಆತಂಕಕಾರಿ ಘಟನೆ ನಡೆದಿದೆ. ಆದರೂ ಸುರಕ್ಷಿತವಾಗಿ ಲ್ಯಾಂಡ್ ಆಗುವ ಮೂಲಕ 450 ಮಂದಿಯ ಪ್ರಾಣಪಾಯವವಾಗುವುದು ತಪ್ಪಿದೆ.
ಹೌದು. ವಿಐಪಿಗಳ ಆಗಮನದ ಹಿನ್ನೆಲೆಯಲ್ಲಿ ದೇಶದ ವಿವಿಧ ನಗರಗಳ ವಿಮಾನ ನಿಲ್ದಾಣಗಳಲ್ಲಿ (ಮುಂಬೈ, ದೆಹಲಿ ಹಾಗೂ ಚೆನ್ನೈ) ವಿಮಾನಗಳ ಪಥವನ್ನು ಬದಲಾಯಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ವಿಐಪಿಗಳಿಗೆ ಮಾರ್ಗ ಬಿಟ್ಟುಕೊಡುವ ಹಿನ್ನೆಲೆಯಲ್ಲಿ ಸೂಚನೆಯ ಮೇರೆಗೆ ಕೆಲ ಹೊತ್ತು ಆಗಸದಲ್ಲೇ ಗಿರಕಿ ಹೊಡೆಯಬೇಕಾದ ಪರಿಸ್ಥಿತಿ ಬಂದಿತ್ತು. ಆದರೆ ಈ ವಿಮಾನಗಳಿಗೆ ಲ್ಯಾಂಡ್ ಆಗಲು ಸೂಚನೆ ಒಂದೆರಡು ನಿಮಿಷ ತಡವಾಗಿ ಬಂದರೂ ಕೂಡಾ ಭಾರೀ ಅನಾಹುತವೇ ಸಂಭವಿಸುತ್ತಿತ್ತು.
ಮುಂಬೈನಲ್ಲಿ ಲ್ಯಾಂಡ್ ಆದ ಜಿಎಲ್ಎಲ್ 108 ವಿಮಾನಕ್ಕೆ ಇಳಿಯಲು ಸಿಗ್ನಲ್ ಇನ್ನೂ ಒಂದೆರಡು ನಿಮಿಷ ಸಿಗದೇ ಹೋಗಿದ್ದರೆ ಖಂಡಿತ ಕಷ್ಟವಾಗುತ್ತಿತ್ತು. ಯಾಕೆಂದರೆ ಆಗಸದಲ್ಲಿರುವಾಗಲೇ ಕೇವಲ ಮೂರು ನಿಮಿಷಗಳಷ್ಟು ಚಲಿಸಬಹುದಾದಷ್ಟು ಇಂಧನವಿತ್ತು! ಇನ್ನು ಮುಂಬೈ- ದೆಹಲಿ ಕಿಂಗ್ಫಿಷರ್ ಐಟಿ 300 ವಿಮಾನ ಲ್ಯಾಂಡ್ ಆದಾಗ ಅದಕ್ಕಿನ್ನು ಕೇವಲ 10 ನಿಮಿಷ ಸಂಚರಿಸಬಹುದಾದಷ್ಟು ಮಾತ್ರ ಇಂಧನವಿತ್ತು. ಜೆಟ್ ಏರ್ವೇಸ್ 9ಡಬ್ಲ್ಯು 2357 ಎಂಬ ವಿಮಾನಕ್ಕೆ ಲ್ಯಾಂಡ್ ಆಗುವಾಗ ಕೇವಲ 13 ನಿಮಿಷ ಮಾತ್ರ ಸಂಚರಿಸಬಲ್ಲಷ್ಟು ಇಂಧನ ಉಳಿದಿತ್ತು. ಇವೆಲ್ಲ ಆಗಿದ್ದು, ವಿಐಪಿಗಳ ಆಗಮದ ಹಿನ್ನೆಲೆಯಲ್ಲಿ.
ಕಿಂಗ್ಫಿಷರ್ ವಿಮಾನದಲ್ಲಿ 330 ಮಂದಿಯಿದ್ದರೆ, ಮತ್ತೊಂದರಲ್ಲಿ 158 ಪ್ರಯಾಣಿಕರಿದ್ದರು. ಇಷ್ಟೇ ಅಲ್ಲ. 11 ವಿಮಾನಗಳನ್ನು ಜೈಪುರ, ಚಂಡೀಗಢ, ಲಕ್ನೋಗಳಿಗೆ ಪಥ ಬದಲಾಯಿಸಲು ಕೋರಲಾಗಿತ್ತು. ಜೊತೆಗೆ 20 ವಿಮಾನಗಳಿಗೆ ದೆಹಲಿ ಏರ್ಪೋರ್ಟ್ನಲ್ಲಿ ಆಗಸದಲ್ಲೇ ಒಂದು ಗಂಟೆಗಳ ಕಾಲ ಗಿರಕಿ ಹೊಡೆಯಲು ಹೇಳಲಾಗಿತ್ತು. ಹೀಗೆಲ್ಲಾ ಮಾಡಿದ್ದು, ವಿಮಾನ ನಿಲ್ದಾಣದಿಂದ ರಾಷ್ಟ್ರಪತಿ ಪ್ರತಿಭಾ ಪಾಟೀಲ್ ಚೀನಾ ಹೊರಡುವವರಿದ್ದರು. ಜೊತೆಗೆ ತುರ್ಕ್ ಮೇನಿಸ್ತಾನದ ಅಧ್ಯಕ್ಷ ಆಗ್ರಾದೆಡೆಗೆ ಹೋಗಬೇಕಿತ್ತು. ಈ ಕಾರಣದಿಂದ ವಿಮಾನ ನಿಲ್ದಾಣವನ್ನೇ ಬಂದ್ ಮಾಡಲಾಗಿತ್ತು!
ಆದರೆ ಈ ವಿಐಪಿಗಳ ಆಗಮನದ ಭರಾಟೆಯಲ್ಲಿ ನೂರಾರು ಪ್ರಯಾಣಿಕರನ್ನು ಹೊತ್ತಿದ್ದ ವಿಮಾನ ಚಾಲಕರು ಗಂಟೆಗಟ್ಟಲೆ ಆಕಾಶದಲ್ಲೇ ವಿಮಾನದೊಂದಿಗೆ ಗಿರಕಿ ಹೊಡೆಯುತ್ತಾ, ಇಂಧನ ಖಾಲಿಯಾಗುವ ಹೊತ್ತಿಗೆ ಆಗಿದ್ದ ಮಾನಸಿಕ ಒತ್ತಡವೇ ಅವಘಡಕ್ಕೆ ಕಾರಣವಾದರೂ ಆಶ್ಚರ್ಯವಿಲ್ಲ.