ಜೂನ್ 3 ಹಾಗೂ 4ರಂದು ಇಲ್ಲಿ ನಡೆಯುತ್ತಿರುವ ಬೃಹತ್ ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶಕ್ಕೆ ಸಿದ್ಧತೆ ಭರದಿಂದ ಸಾಗುತ್ತಿದ್ದು, ಗರಿಷ್ಟ 5 ಲಕ್ಷ ಕೋಟಿ ರೂಪಾಯಿಗಳಷ್ಟು ಬಂಡವಾಳ ಹರಿದು ಬರುವ ನಿರೀಕ್ಷೆಯಿದೆ.
ಈ ಹಿಂದೆ 2 ಲಕ್ಷ ಕೋಟಿ ಬಂಡವಾಳ ಹೂಡಿಕೆಯನ್ನು ನಿರೀಕ್ಷಿಸಲಾಗಿತ್ತಾದರೂ, ನಂತರ ಉದ್ಯಮಿಗಳ ಆಸಕ್ತಿ ಹೆಚ್ಚತೊಡಗಿತ್ತು. ಹೀಗಾಗಿ ಕಳೆದ ವಾರ ಕೈಗಾರಿಕೆಗಳಿಗೆ ಅಂಗೀಕಾರ ನೀಡುವ ರಾಜ್ಯದ ಉನ್ನತ ಸಭೆಯ ನಂತರ ಇದು 5 ಲಕ್ಷ ಕೋಟಿ ರೂಪಾಯಿಗಳಿಗೇರಿದೆ.
ಈ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿದ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ, ಉದ್ದಿಮೆ ವಲಯದ ಎಲ್ಲ ಕ್ಷೇತ್ರಗಳಲ್ಲೂ ದೇಶದ ಹಾಗೂ ವಿದೇಶೀ ಮೂಲದ ತಲಾ 10 ಮುಂಚೂಣಿಯ ಉದ್ದಿಮೆ ಸಂಸ್ಥೆಗಳು ರಾಜ್ಯದಲ್ಲಿ ತಮ್ಮ ವಹಿವಾಟು ಆರಂಭಿಸಲು ಹಾಗೂ ತಮ್ಮ ಘಟಕಗಳನ್ನು ತೆರೆಯಲು ಮುಂದೆ ಬಂದಿವೆ. ಜೂ.4ರಂದು ಹೂಡಿಕೆ ಪ್ರಸ್ತಾಪ ಮುಂದಿಡಲು ತಿಳಿಸಿದ್ದೇವೆ. ಅಂದು ಮಧ್ಯಾಹ್ನವೇ ಸಭೆ ಸೇರಿ ಅನುಮೋದನೆ ನೀಡುವ ಕಾರ್ಯ ಮಾಡಲಿದ್ದೇವೆ ಎಂದು ತಿಳಿಸಿದರು.
ಹೀಗಾಗಿ ವಿವಿಧ ಯೋಜನೆಗಳಿಗಾಗಿ 1 ಲಕ್ಷ ಎಕರೆ ಭೂಮಿಯನ್ನು ವಶಪಡಿಸಿಕೊಳ್ಳಲಾಗುತ್ತದೆ. ರೈತರ ಸಹಕಾರದಿಂದಲೇ ಒಣ ಹಾಗೂ ಬಂಜರು ಭೂಮಿಯನ್ನು ಸ್ವಾಧೀನ ಪಡಿಸಿಕೊಂಡು ಭುಮಿ ಕಳೆದುಕೊಂಡ ರೈತರಿಗೆ ಸೂಕ್ತ ಪರಿಹಾರ ಒದಗಿಸುತ್ತೇವೆ. ರೈತರ ಮಕ್ಕಳಿಗೆ ಈ ಕೈಗಾರಿಕಾ ತರಬೇತಿ ಸಂಸ್ಥೆಗಳಲ್ಲಿ ಶೇ.5ರಷ್ಟು ಮೀಸಲಾತಿಯನ್ನೂ ಒದಗಿಸಲಿದೆ ಎಂದರು.