ಉದ್ಯಾನನಗರಿಯಲ್ಲಿ ನಡೆದ ಎರಡು ದಿನಗಳ ಜಾಗತಿಕ ಬಂಡವಾಳ ಹೂಡಿಕೆ ಸಮಾವೇಶದಲ್ಲಿ ರಾಜ್ಯದ ಐತಿಹಾಸಿಕ ತಾಣಗಳಾದ ಹಂಪಿ, ಬಾದಾಮಿ, ಪಟ್ಟದಕಲ್ಲು, ವಿಜಾಪುರ ಮೊದಲಾದ ಹೆಲಿ ಟೂರಿಸಂ ಸಂಪರ್ಕ ಕಲ್ಪಿಸಲು ಸರ್ಕಾರ ಮುಂದಾಗಿದ್ದು, ಈ ಸಂಬಂಧ ಒಯಸಿಸ್ ವಿಮಾನಯಾನ ಸಂಸ್ಥೆ ಜೊತೆ ಒಪ್ಪಂದಕ್ಕೆ ಸಹಿ ಹಾಕಿದೆ.
ಎರಡು ದಿನಗಳ ಕಾಲ ನಡೆದು ಶುಕ್ರವಾರ ಅಂತ್ಯಗೊಂಡ ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶದಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮತ್ತು ಪ್ರವಾಸೋದ್ಯಮ ಸಚಿವ ಜನಾರ್ದನ ರೆಡ್ಡಿ ಅವರ ಸಮ್ಮುಖದಲ್ಲಿ ಅಧಿಕಾರಿಗಳು ಒಪ್ಪಂದಕ್ಕೆ ಸಹಿ ಹಾಕಿದರು.
ಹೆಲಿ ಟೂರಿಸಂ ಆರಂಭಿಸುತ್ತಿರುವ ದೇಶದ ಮೊದಲ ರಾಜ್ಯವೆಂಬ ಕೀರ್ತಿಗೆ ಕರ್ನಾಟಕ ಪಾತ್ರವಾಗಿದೆ. ಎಲ್ಲವೂ ನಿರೀಕ್ಷೆ ಪ್ರಕಾರ ನಡೆದರೆ ಆಗಸ್ಟ್ ವೇಳೆಗೆ ಹೆಲಿಕಾಪ್ಟರ್ಗಳಲ್ಲಿ ಪ್ರವಾಸಿಗರ ಸಂಚಾರ ಕೂಡ ಆರಂಭವಾಗಲಿದೆ ಎಂದು ಜನಾರ್ದನ ರೆಡ್ಡಿ ನಂತರ ಸುದ್ದಿಗಾರರೊಂದಿಗೆ ಮಾತನಾಡುತ್ತ ತಿಳಿಸಿದರು.
ಖಾಸಗಿ ವಿಮಾನಯಾನ ಸಂಸ್ಥೆಯೇ ಹೆಲಿಕಾಪ್ಟರ್ಗಳನ್ನು ಖರೀದಿಸಿ, ಪ್ರವಾಸಿಗರನ್ನು ಕರೆದೊಯ್ಯುವ ಕೆಲಸ ಮಾಡುತ್ತದೆ. ಅದಕ್ಕೆ ಬೇಕಾಗುವ ಮೂಲಭೂತ ಸೌಲಭ್ಯವನ್ನು ಸರ್ಕಾರ ನೀಡುತ್ತದೆ. ಆರಂಭದಲ್ಲಿ ಮೂರು ಹೆಲಿಕಾಪ್ಟರ್ ಈ ಸೇವೆಯನ್ನು ಒದಗಿಸುತ್ತದೆ ಎಂದು ರೆಡ್ಡಿ ವಿವರಿಸಿದ್ದಾರೆ.