ಕೇಂದ್ರದ ಅಧಿಕಾರಯುತ ಸಚಿವರ ಸಮಿತಿ ಇಂದು ಸಭೆ ಸೇರಿ, ಪೆಟ್ರೋಲ್, ಡೀಸೆಲ್ ಮತ್ತು ಅನಿಲ ದರ ಏರಿಕೆ ಕುರಿತಂತೆ ಅಂತಿಮ ನಿರ್ಧಾರ ತೆಗೆದುಕೊಳ್ಳಲಿದ್ದು, ಪೆಟ್ರೋಲ್ ಮತ್ತು ಡೀಸೆಲ್ ಪ್ರತಿ ಲೀಟರ್ಗೆ 3.50 ರೂಪಾಯಿ ಹಾಗೂ ಅಡುಗೆ ಅನಿಲ ದರದಲ್ಲಿ 25-50 ರೂಪಾಯಿಗಳಷ್ಟು ಹೆಚ್ಚಿಸುವ ಸಾಧ್ಯತೆಗಳಿವೆ.
ಕೇಂದ್ರದ ವಿತ್ತಖಾತೆ ಸಚಿವ ಪ್ರಣಬ್ ಮುಖರ್ಜಿ ನೇತತ್ವದ ಅಧಿಕಾರಯುತ ಸಚಿವ ಸಂಪುಟ ಸಮಿತಿ,ಪೆಟ್ರೋಲ್ ಮತ್ತು ಡೀಸೆಲ್ ದರ ಏರಿಕೆಗಳನ್ನು ಸರಕಾರದ ನಿಯಂತ್ರಣದಿಂದ ಮುಕ್ತಗೊಳಿಸುವ ಕುರಿತಂತೆ ಕೂಡಾ ಚರ್ಚೆ ನಡೆಸಲಿದೆ ಎಂದು ಪೆಟ್ರೋಲಿಯಂ ಸಚಿವಾಲಯದ ಅಧಿಕಾರಿಗಳು ತಿಳಿಸಿದ್ದಾರೆ.
ಅಮುದು ದರಕ್ಕಿಂತ ಕಡಿಮೆ ದರದಲ್ಲಿ ಇಂಧನ ಮಾರಾಟದಿಂದಾಗಿ ಭಾರಿ ನಷ್ಟವನ್ನು ಎದುರಿಸಬೇಕಾಗಿದೆ. ಒಂದು ವೇಳೆ ಪೆಟ್ರೋಲ್, ಡೀಸೆಲ್ ಮತ್ತು ಅಡುಗೆ ಅನಿಲ ದರಗಳಲ್ಲಿ ಹೆಚ್ಚಳ ಮಾಡದಿದ್ದಲ್ಲಿ 72,300 ಕೋಟಿ ರೂಪಾಯಿಗಳ ನಷ್ಟವನ್ನು ಭರಿಸುವ ಕುರಿತಂತೆ ಪರ್ಯಾಯ ಮಾರ್ಗವನ್ನು ಅವಲಂಬಿಸಬೇಕಾಗುತ್ತದೆ ಎಂದು ಉನ್ನತ ಅಧಿಕಾರಿಗಳು ತಿಳಿಸಿದ್ದಾರೆ.
ಸರಕಾರದಿಂದ ತೈಲೋತ್ಪನ್ನ ದರ ಏರಿಕೆಯಿಂದ ಮುಕ್ತಗೊಳಿಸಿದಲ್ಲಿ, ಅಮುದು ದರ ಹಾಗೂ ಚಿಲ್ಲರೆ ವಹಿವಾಟಿನ ದರದ ಮಧ್ಯದ ಅಂತರದಿಂದಾಗಿ, ಪ್ರತಿ ಲೀಟರ್ಗೆ 3.35ರೂಪಾಯಿ ಹೆಚ್ಚಳವಾಗುವ ಸಾಧ್ಯತೆಗಳಿವೆ ಎಂದು ಸಚಿವಾಲಯದ ಮೂಲಗಳು ತಿಳಿಸಿವೆ.
ಡೀಸೆಲ್ ದರ ಏರಿಕೆಯನ್ನು ಸರಕಾರದ ನಿಯಂತ್ರಣದಿಂದ ಮುಕ್ತಗೊಳಿಸುವುದಕ್ಕೆ, ಕೇಂದ್ರ ರೈಲ್ವೆ ಖಾತೆ ಸಚಿವೆ ಮಮತಾ ಬ್ಯಾನರ್ಜಿ ಒಪ್ಪಿಗೆ ಸೂಚಿಸಿದಲ್ಲಿ ಶೀಘ್ರದಲ್ಲಿ ಮುಕ್ತಗೊಳಿಸಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.