ದೇಶದ ತೈಲ ಕಂಪೆನಿಗಳು ಇಂಧನ ಮಾರಾಟದಿಂದ ಭಾರಿ ನಷ್ಟ ಅನುಭವಿಸುತ್ತಿರುವ ಹಿನ್ನೆಲೆಯಲ್ಲಿ,ದರಗಳನ್ನು ಹೆಚ್ಚಿಸುವ ನಿಟ್ಟಿನಲ್ಲಿ ಅಧಿಕಾರಯುತ ಸಚಿವರ ಸಮಿತಿ ಚರ್ಚೆ ನಡೆಸಿದೆ ಎಂದು ಪೆಟ್ರೋಲಿಯಂ ಖಾತೆ ಸಚಿವ ಮುರಳಿ ದೇವ್ರಾ ಹೇಳಿದ್ದಾರೆ.
ಪ್ರಸಕ್ತ ಸಂದರ್ಭದಲ್ಲಿ ತೈಲ ದರಗಳನ್ನು ಹೆಚ್ಚಿಸುವುದು ಸೂಕ್ತವೆ ಎಂದು ಕೇಳಿದ ಪ್ರಶ್ನೆಗೆ ಉತ್ತರಿಸಿದ ದೇವ್ರಾ,ದರ ಏರಿಕೆ ಅನಿವಾರ್ಯವಾಗಿದೆ ಎಂದು ತಿಳಿಸಿದ್ದಾರೆ.
ತೈಲ ಮಾರಾಟದಿಂದಾಗಿ ತೈಲ ಕಂಪೆನಿಗಳು ವಾರ್ಷಿಕವಾಗಿ 800 ಬಿಲಿಯನ್ ರೂಪಾಯಿಗಳಿಂದ 900 ಬಿಲಿಯನ್ ರೂಪಾಯಿಗಳ ನಷ್ಟ ಅನುಭವಿಸುತ್ತಿರುವುದರಿಂದ, ದರ ಏರಿಕೆ ಅಗತ್ಯವಾಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ಅಂತಾರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಕಚ್ಚಾ ತೈಲ ದರ 2003ರ ಅವಧಿಯಲ್ಲಿ ಪ್ರತಿ ಬ್ಯಾರೆಲ್ಗೆ 28 ಡಾಲರ್ಗಳಿಂದ 147 ಡಾಲರ್ಗಳಿಗೆ ಏರಿಕೆ ಕಂಡಿತ್ತು. 2008ರಿಂದ 2010ರ ಅವಧಿಯಲ್ಲಿ ಪ್ರತಿ ಬ್ಯಾರೆಲ್ಗೆ 75 ಡಾಲರ್ಗಳಿಗೆ ಏರಿಕೆಯಾಗಿರುವುದರಿಂದ ತೈಲ ಕಂಪೆನಿಗಳು ಭಾರಿ ನಷ್ಟವನ್ನು ಭರಿಸುತ್ತಿವೆ.
ಅಧಿಕಾರಯುತ ಸಚಿವರ ಸಮಿತಿಯ ನೇತೃತ್ವವನ್ನು ವಿತ್ತಸಚಿವ ಪ್ರಣಬ್ ಮುಖರ್ಜಿ ವಹಿಸಿದ್ದಾರೆ.ಸಮಿತಿಯಲ್ಲಿ ಸಚಿವ ಮುರಳಿ ದೇವ್ರಾ,ಕೃಷಿ ಸಚಿವ ಶರದ್ ಪವಾರ್, ರಸಾಯನಿಕ ಹಾಗೂ ರಸಗೊಬ್ಬರ ಖಾತೆ ಸಚಿವ ಎಂ.ಕೆ.ಅಝಗಿರಿ, ರೈಲ್ವೆ ಖಾತೆ ಸಚಿವೆ ಮಮತಾ ಬ್ಯಾನರ್ಜಿ, ಸಾರಿಗೆ ಸಚಿವ ಕಮಲ್ನಾಥ್ ಮತ್ತು ಯೋಜನಾ ಆಯೋಗದ ಉಪಾಧ್ಯಕ್ಷ ಮೊಂಟೆಕ್ ಸಿಂಗ್ ಆಹ್ಲುವಾಲಿಯಾ ಸದಸ್ಯರಾಗಿದ್ದಾರೆ.