ಉನ್ನತ ಮಟ್ಟದ ಅಧಿಕಾರಯುತ ಸಚಿವರ ಸಮಿತಿ, ಇಂದು ಸಭೆ ಸೇರಿ, ಕಿರಿಟ್ ಪಾರೀಖ್ ಶಿಫಾರಸು ಹಾಗೂ ತೈಲ ದರಗಳ ಏರಿಕೆ ಕುರಿತಂತೆ ಚರ್ಚಿಸಲಾಯಿತಾದರೂ ಅಂತಿಮವಾಗಿ ಯಾವುದೇ ನಿರ್ಧಾರ ತೆಗೆದುಕೊಳ್ಳಲಾಗದೆ ಸಭೆಯನ್ನು ಅಂತ್ಯಗೊಳಿಸಿತು.
ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಪೆಟ್ರೋಲಿಯಂ ಖಾತೆ ಸಚಿವ ಮುರಳಿ ದೇವ್ರಾ ಸುದ್ದಿಗಾರರೊಂದಿಗೆ ಮಾತನಾಡಿ, ಅಧಿಕಾರಯುತ ಸಚಿವ ಸಂಪುಟ ಸಮಿತಿ, ಶೀಘ್ರದಲ್ಲಿ ಸಭೆ ಸೇರಲಿದ್ದು, ತೈಲ ದರ ಏರಿಕೆ ಕುರಿತಂತೆ ಮತ್ತೊಮ್ಮೆ ಚರ್ಚಿಸಲಿದೆ ಎಂದು ಹೇಳಿದ್ದಾರೆ.
ಪಾರೀಕ್ ಸಮಿತಿ, ಕೇಂದ್ರ ಸರಕಾರ ಅನುದಾನ ನೀಡುವ ವ್ಯವಸ್ಥೆಯನ್ನು ರದ್ದುಗೊಳಿಸಿ, ಅಂತಾರಾಷ್ಟ್ರೀಯ ತೈಲ ಮಾರುಕಟ್ಟೆಯ ಪ್ರಕಾರ, ತೈಲ ದರ ನಿಗದಿಪಡಿಸುವಿಕೆಯನ್ನು ತೈಲ ಕಂಪೆನಿಗಳಿಗೆ ಮುಕ್ತವಾಗಿರಿಸಬೇಕು ಎಂದು ಶಿಫಾರಸು ಮಾಡಿದೆ.ಪಾರೀಕ್ ಸಮಿತಿಯ ಶಿಫಾರಸುಗಳಲ್ಲಿ ಕೆಲವನ್ನು ಜಾರಿಗೆ ತಂದಲ್ಲಿ ಪ್ರತಿ ಲೀಟರ್ ಪೆಟ್ರೋಲ್ಗೆ 3 ರೂಪಾಯಿ ದರ ಹೆಚ್ಚಳವಾಗಲಿದೆ.
ಯುಪಿಎ ಪಕ್ಷದ ಪಾಲುದಾರ ಪಕ್ಷಗಳು ಹಾಗೂ ವಿರೋಧ ಪಕ್ಷಗಳ ಭಾರಿ ವಿರೋಧದಿಂದಾಗಿ, ತೈಲ ದರ ಏರಿಕೆ ನಿರ್ಧಾರವನ್ನು ಮುಂದೂಡಲಾಗಿದೆ ಎಂದು ಮೂಲಗಳು ತಿಳಿಸಿವೆ.
ಇದಕ್ಕಿಂತ ಮೊದಲು, ಸಚಿವ ದೇವ್ರಾ ಮಾತನಾಡಿ ಮಾರುಕಟ್ಟೆಯ ನಿಗದಿತ ದರಕ್ಕಿಂತ ಕಡಿಮೆ ದರದಲ್ಲಿ ತೈಲವನ್ನು ಮಾರಾಟ ಮಾಡುತ್ತಿರುವುದರಿಂದ, ತೈಲ ಕಂಪೆನಿಗಳು ಭಾರಿ ನಷ್ಟ ಅನುಭವಿಸುತ್ತಿವೆ ಎಂದು ತಿಳಿಸಿದ್ದಾರೆ.
ಯೋಜನಾ ಆಯೋಗದ ಉಪಾಧ್ಯಕ್ಷ ಮೊಂಟೆಕ್ ಸಿಂಗ್ ಆಹ್ಲುವಾಲಿಯಾ, ತೈಲ ದರ ಏರಿಕೆಗೆ ಸಮ್ಮತಿ ಸೂಚಿಸಿದ್ದಾರೆ.
ಪ್ರಸಕ್ತ ಸಂದರ್ಭದಲ್ಲಿ ತೈಲ ದರಗಳನ್ನು ಹೆಚ್ಚಿಸುವುದು ಸೂಕ್ತವೆ ಎಂದು ಕೇಳಿದ ಪ್ರಶ್ನೆಗೆ ಉತ್ತರಿಸಿದ ದೇವ್ರಾ,ದರ ಏರಿಕೆ ಅನಿವಾರ್ಯವಾಗಿದೆ ಎಂದು ತಿಳಿಸಿದ್ದಾರೆ.
ತೈಲ ಮಾರಾಟದಿಂದಾಗಿ ತೈಲ ಕಂಪೆನಿಗಳು ವಾರ್ಷಿಕವಾಗಿ 800 ಬಿಲಿಯನ್ ರೂಪಾಯಿಗಳಿಂದ 900 ಬಿಲಿಯನ್ ರೂಪಾಯಿಗಳ ನಷ್ಟ ಅನುಭವಿಸುತ್ತಿರುವುದರಿಂದ, ದರ ಏರಿಕೆ ಅಗತ್ಯವಾಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ಅಂತಾರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಕಚ್ಚಾ ತೈಲ ದರ 2003ರ ಅವಧಿಯಲ್ಲಿ ಪ್ರತಿ ಬ್ಯಾರೆಲ್ಗೆ 28 ಡಾಲರ್ಗಳಿಂದ 147 ಡಾಲರ್ಗಳಿಗೆ ಏರಿಕೆ ಕಂಡಿತ್ತು. 2008ರಿಂದ 2010ರ ಅವಧಿಯಲ್ಲಿ ಪ್ರತಿ ಬ್ಯಾರೆಲ್ಗೆ 75 ಡಾಲರ್ಗಳಿಗೆ ಏರಿಕೆಯಾಗಿರುವುದರಿಂದ ತೈಲ ಕಂಪೆನಿಗಳು ಭಾರಿ ನಷ್ಟವನ್ನು ಭರಿಸುತ್ತಿವೆ.
ಅಧಿಕಾರಯುತ ಸಚಿವರ ಸಮಿತಿಯ ನೇತೃತ್ವವನ್ನು ವಿತ್ತಸಚಿವ ಪ್ರಣಬ್ ಮುಖರ್ಜಿ ವಹಿಸಿದ್ದಾರೆ.ಸಮಿತಿಯಲ್ಲಿ ಸಚಿವ ಮುರಳಿ ದೇವ್ರಾ,ಕೃಷಿ ಸಚಿವ ಶರದ್ ಪವಾರ್, ರಸಾಯನಿಕ ಹಾಗೂ ರಸಗೊಬ್ಬರ ಖಾತೆ ಸಚಿವ ಎಂ.ಕೆ.ಅಝಗಿರಿ, ರೈಲ್ವೆ ಖಾತೆ ಸಚಿವೆ ಮಮತಾ ಬ್ಯಾನರ್ಜಿ, ಸಾರಿಗೆ ಸಚಿವ ಕಮಲ್ನಾಥ್ ಮತ್ತು ಯೋಜನಾ ಆಯೋಗದ ಉಪಾಧ್ಯಕ್ಷ ಮೊಂಟೆಕ್ ಸಿಂಗ್ ಆಹ್ಲುವಾಲಿಯಾ ಸದಸ್ಯರಾಗಿದ್ದಾರೆ.