ರಾಜಧಾನಿಯ ಮಾರುಕಟ್ಟೆಗಳಲ್ಲಿ ಸರಬರಾಜು ಕೊರತೆಯಿಂದಾಗಿ ಈರುಳ್ಳಿ ದರ ಪ್ರತಿ ಕೆಜಿಗೆ 60-70 ರೂಪಾಯಿಗಳಿಗೆ ಏರಿಕೆಯಾಗಿದ್ದು, ಕೃಷಿ ಉತ್ಪನ್ನಗಳ ರಫ್ತು ನಿಯಮಗಳನ್ನು ಪರಿಷ್ಕರಿಸಲು ಸರಕಾರ ತುರ್ತುಸಭೆಯನ್ನು ಕರೆದಿದೆ ಎಂದು ಮೂಲಗಳು ತಿಳಿಸಿವೆ.
ದೇಶಾದ್ಯಂತ ಈರುಳ್ಳಿ ದರ ಈಗಾಗಲೇ 35-40 ರೂಪಾಯಿಗಳಿಗೆ ಏರಿಕೆಯಾಗಿದ್ದು, ರವಿವಾರದಂದು ನವದೆಹಲಿ ಹಾಗೂ ನೆರೆಯ ಜಿಲ್ಲೆಗಳಲ್ಲಿ ಪ್ರತಿ ಕೆಜಿಗೆ 60-70 ರೂಪಾಯಿಗಳಿಗೆ ಏರಿಕೆಯಾಗಿದೆ.
ಏಷ್ಯಾದ ಬೃಹತ್ ಹಣ್ಣು ಮತ್ತು ತರಕಾರಿ ಮಾರುಕಟ್ಟೆಯಾದ ಅಜಾದ್ಪುರ್ ಮಾರುಕಟ್ಟೆಯಲ್ಲಿ ಈರುಳ್ಳಿ ದರ, ಪ್ರತಿ ಕೆಜಿಗೆ 30-60 ರೂಪಾಯಿಗಳಿಗೆ ಏರಿಕೆಯಾಗಿದೆ ಎಂದು ವರ್ತಕರು ತಿಳಿಸಿದ್ದಾರೆ.
ಮಹಾರಾಷ್ಟ್ರ, ಗುಜರಾತ್ ಮತ್ತು ದಕ್ಷಿಣ ಭಾರತದ ರಾಜ್ಯಗಳಲ್ಲಿ ಅಕಾಲಿಕ ಮಳೆಯಿಂದಾಗಿ, ಈರುಳ್ಳಿ ಉತ್ಪಾದನೆಯಲ್ಲಿ ಕುಸಿತವಾಗಿದ್ದು, ಸರಬರಾಜಿನ ಕೊರತೆಯೂ ಅಡ್ಡಿಯಾಗಿದೆ ಎಂದು ವಹಿವಾಟಿನ ಮೂಲಗಳು ತಿಳಿಸಿವೆ.