ಜಾಗತಿಕ ಮಟ್ಟದಲ್ಲಿ ತೈಲ ಬೆಲೆ ಏರಿಕೆಯ ಪರಿಣಾಮ ಇಂಧನ ಬೆಲೆ ಏರಿಕೆ ಅನಿವಾರ್ಯವಾಗಿದ್ದು, ಇದನ್ನು ತಪ್ಪಿಸುವ ನಿಟ್ಟಿನಲ್ಲಿ ಕಚ್ಚಾ ತೈಲದ ಸೀಮಾ ಸುಂಕವನ್ನು ರದ್ದುಪಡಿಸಬೇಕು ಮತ್ತು ಡೀಸೆಲ್ ಮೇಲಿನ ಅಬಕಾರಿ ಸುಂಕವನ್ನು ಕಡಿತಗೊಳಿಸಬೇಕು ಎಂದು ನಿರ್ಗಮನ ಇಂಧನ ಸಚಿವ ಮುರಳಿ ದಿಯೋರಾ ಬುಧವಾರ ಒತ್ತಾಯಿಸಿದ್ದಾರೆ.
ಹಣಕಾಸು ಸಚಿವ ಪ್ರಣಬ್ ಮುಖರ್ಜಿ ಅವರು ಕಳೆದ ವರ್ಷದ ಆಯವ್ಯಯದಲ್ಲಿ ಕಚ್ಚಾ ತೈಲದ ಮೇಲೆ ಹೇರಿದ್ದ ಶೇ. 5 ರಷ್ಟು ಸೀಮಾ ಸುಂಕವನ್ನು ಹಿಂತೆಗೆದುಕೊಳ್ಳಬೇಕು ಹಾಗೂ ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಅಬಕಾರಿ ಸುಂಕದಲ್ಲಿ ಪ್ರತಿ ಲೀಟರಿಗೆ ಒಂದು ರೂ. ಹೆಚ್ಚಿಸಿದ್ದನ್ನೂ ಹಿಂತೆಗೆದುಕೊಳ್ಳಬೇಕು ಎಂದು ಅವರು ಆಗ್ರಹಿಸಿದ್ದಾರೆ.
ಕಳೆದ ವರ್ಷ ಫೆಬ್ರವರಿ 26 ರಂದು ಪ್ರಣಬ್ ಮುಖರ್ಜಿ ಅವರು ಕಚ್ಚಾ ತೈಲದ ಮೇಲೆ ಶೇ.5 ರಷ್ಟು ಆಮದು ಸುಂಕ ವಿಧಿಸಿದ್ದರು. ಹಾಗೂ ಶೇ. 2.5 ರಷ್ಟಿದ್ದ ಪೆಟ್ರೋಲ್ ಮತ್ತು ಡೀಸೆಲ್ನ ಆಮದು ಸುಂಕವನ್ನು ಶೇ. 7.5 ಕ್ಕೆ ಏರಿಸಿದರು. ಅಲ್ಲದೆ ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಅಬಕಾರಿ ಸುಂಕವನ್ನು ಪ್ರತೀ ಲೀಟರಿಗೆ ಒಂದು ರೂಪಾಯಿಯಂತೆ ಹೆಚ್ಚಿಸಿ ಅನುಕ್ರಮವಾಗಿ 14.35 ರೂ. ಮತ್ತು 4.60 ರೂ.ಗೆ ಹೆಚ್ಚಿಸಿದ್ದರು.
ಇದರಿಂದಾಗಿ ಪ್ರತೀ ಲೀಟರ್ ಪೆಟ್ರೋಲ್ ಬೆಲೆ 2.71 ರೂ. ಮತ್ತು ಡೀಸೆಲ್ ಬೆಲೆ 2.55 ರೂ. ಹೆಚ್ಚಳ ಕಂಡಿತ್ತು.