ವಿದೇಶಗಳಲ್ಲಿ ಅಕ್ರಮವಾಗಿ ಬಚ್ಚಿಟ್ಟಿರುವ ಕಪ್ಪು ಹಣದ ವಿಷಯದಲ್ಲಿ ಯಾವುದೇ ಮುಚ್ಚುಮರೆ ಇಲ್ಲ ಮತ್ತು ಸರಕಾರ ಆ ಹಣವನ್ನೆಲ್ಲ ಭಾರತಕ್ಕೆ ವಾಪಾಸು ತರಲು ಬದ್ಧವಾಗಿದೆ ಎಂದು ರಕ್ಷಣಾ ಸಚಿವ ಎ.ಕೆ.ಆಂಟನಿ ಗುರುವಾರ ತಿಳಿಸಿದ್ದಾರೆ.
1.5 ನೂರು ಸಾವಿರ ಕೋಟಿ ಡಾಲರ್ ಕಪ್ಪು ಹಣವನ್ನು ಅಕ್ರಮವಾಗಿ, ತೆರಿಗೆ ವಂಚಿಸಿ ವಿದೇಶದಲ್ಲಿ ಬಚ್ಚಿಟ್ಟಿರುವವರ ಹೆಸರನ್ನು ಇನ್ನೂ ಏಕೆ ಬಹಿರಂಗ ಪಡಿಸಿಲ್ಲ ಎಂದು ಸುಪ್ರೀಂ ಕೋರ್ಟ್ ಪ್ರಶ್ನಿಸಿದ ಬಳಿಕ, ಗುರುವಾರ ಪ್ರಧಾನಿ ಮನಮೋಹನ ಸಿಂಗ್ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆಯ ಬಳಿಕ ಆಂಟನಿ ಈ ವಿಷಯ ತಿಳಿಸಿದರು.
ವಿದೇಶದಲ್ಲಿರುವ ಎಲ್ಲಾ ಹಣವನ್ನು ವಾಪಾಸು ತಂದು ಸತ್ಯವನ್ನು ಬಹಿರಂಗಪಡಿಸಲು ನಮ್ಮ ಸರ್ಕಾರ ಬದ್ದವಾಗಿದೆ ಎಂದ ಆಂಟನಿ, ಈ ನಿಟ್ಟಿನಲ್ಲಿ ಕಾರ್ಯ ಪ್ರಗತಿಯಲ್ಲಿದ್ದು, ಯಾವುದೇ ಮುಚ್ಚುಮರೆ ಮಾಡುವ ವಿಷಯ ಇಲ್ಲ ಎಂದು ಎನ್ಸಿಸಿ ಗಣರಾಜ್ಯೋತ್ಸವ ಶಿಬಿರದ ಸಂದರ್ಭ ಸುದ್ದಿಗಾರರೊಂದಿಗೆ ತಿಳಿಸಿದರು.
ರಕ್ಷಣಾ ವ್ಯವಹಾರದಲ್ಲಿ ನಡೆದ ಲಂಚದ ಹಣವೆಲ್ಲವೂ ಗೌಪ್ಯತೆ ಕಾಯ್ದುಕೊಳ್ಳುವ ನೀತಿಯನ್ನು ಅನುಸರಿಸುತ್ತಿರುವ ಸ್ವಿಟ್ಜರ್ಲೆಂಡ್ ಬ್ಯಾಂಕುಗಳಲ್ಲಿ ಕೊಳೆಯುತ್ತಿರುವ ಬಗ್ಗೆ ವರದಿಗಾರರು ಪ್ರಶ್ನಿಸಿದಾಗ ಆಂಟನಿ ಈ ಉತ್ತರ ನೀಡಿದರು.
ಈ ಬಗ್ಗೆ ಪ್ರಧಾನಿ ಮತ್ತು ಹಣಕಾಸು ಸಚಿವರು ಈಗಾಗಲೇ ಸರಕಾರದ ನಿಲುವನ್ನು ಸ್ಪಷ್ಟಪಡಿಸಿದ್ದಾರೆ ಎಂದು ಆಂಟನಿ ನುಡಿದರು. ಅಕ್ರಮ ಕಪ್ಪು ಹಣವನ್ನು ವಿದೇಶಿ ಬ್ಯಾಂಕ್ನಿಂದ ತಕ್ಷಣ ವಾಪಾಸು ತರಲು ಯಾವುದೇ ತುರ್ತು ಪರಿಹಾರ ಮಾರ್ಗಗಳಿಲ್ಲ ಎಂದು ಬುಧವಾರ ತಿಳಿಸಿರುವ ಪ್ರಧಾನಿ, ವಿದೇಶದ ಜತೆಗಿನ ಒಪ್ಪಂದಗಳಿಂದಾಗಿ, ಸರಕಾರವು ಇದನ್ನು ಬಹಿರಂಗ ಮಾಡುವಂತಿಲ್ಲ ಎಂದಿದ್ದರು.
ಇದಕ್ಕೆ ಮೊದಲು, 'ತೆರಿಗೆ ವಂಚನೆ ಎಂಬುದು ಬಲುದೊಡ್ಡ ಅಪರಾಧ' ಎಂದು ಹೇಳಿದ್ದ ಸುಪ್ರೀಂ ಕೋರ್ಟ್, ವಿದೇಶೀ ಬ್ಯಾಂಕುಗಳಲ್ಲಿ ಇಂತಹಾ ಖಾತೆಗಳನ್ನು ಹೊಂದಿರುವವರ ಕುರಿತ ಮಾಹಿತಿಯನ್ನು ಮುಚ್ಚಿಟ್ಟಿರುವ ಸರಕಾರವನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿತ್ತು.